ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಕ್ಕೆ ನಡೆಯಲಿರುವ ಉಪಚುನಾವಣೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಇಂದು ಕೆಪಿಸಿಸಿ ಕಚೇರಿಯಲ್ಲಿ ಸಿ.ಪಿ. ಯೋಗೇಶ್ವರ್ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುವ ಮೂಲಕ ಮತ್ತೆ ತಮ್ಮ ತವರು ಪಕ್ಷಕ್ಕೆ ಮರಳಿದ್ದಾರೆ.
ಪಕ್ಷಕ್ಕೆ ಸೇರ್ಪಡೆಗೊಂಡು ಮಾತನಾಡಿದ ಸಿಪಿ ಯೋಗೇಶ್ವರ್, ನಾನು ಸ್ವಯಂ ಪ್ರೇರಣೆಯಿಂದ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದೇನೆ. ನನ್ನ ತವರು ಮನೆ ಕಾಂಗ್ರೆಸ್ ಪಕ್ಷಕ್ಕೆ ವಾಪಸ್ ಮರಳಿರೋದು ಖುಷಿ ತಂದಿದೆ. ನನ್ನನ್ನು ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಲು ಕಾರಣರಾದ ಡಿಕೆ ಸುರೇಶ್ ಅವರಿಗೆ ಧನ್ಯವಾದ ಹೇಳುತ್ತೇನೆ ಎಂದಿದ್ದಾರೆ.
ನನ್ನ ರಾಜಕೀಯ ಜೀವನ ಶುರು ಮಾಡಿದ್ದೇ ಕಾಂಗ್ರೆಸ್ ಪಕ್ಷದಿಂದ. ಡಿಕೆಶಿ ಅವರ ಜೊತೆ ರಾಜಕೀಯ ಕಲಿತಿದ್ದೇನೆ ಅವರು ರಾಜಕೀಯ ಗುರು. ನಾನು ಕಾಂಗ್ರೆಸ್ ಬಂದಿದ್ದು ಖುಷಿಯಾಗಿದೆ ಎಂದಿದ್ದಾರೆ.
ನಾವು ಕಟ್ಟಿದ ಮನೆಯಲ್ಲಿ ನಾವೇ ವಾಸ ಮಾಡಲಾಗದ ವಾತಾವರಣ ನಿರ್ಮಾಣ ಆಗುತ್ತೆ ಆ ತರದ ಕಾರಣಗಳಿಂದ ನಾನು ಹೊರಗಡೆ ಹೋಗಿದ್ದೇ. ಈಗ ಬಿಜೆಪಿ ಜೆಡಿಎಸ್ ರಾಜಕೀಯದಿಂದ ನಾನು ಮನನೊಂದು ಯಾವುದೇ ಷರತ್ತುಗಳನ್ನು ಹಾಕದೆ ಕಾಂಗ್ರೆಸ್ ಪಕ್ಷವನ ಸೇರ್ಪಡೆಯಾಗುತ್ತಿದ್ದೇನೆ. ನನ್ನ ಮೂಲ ಪಕ್ಷಕ್ಕೆ ನಾನು ಮತ್ತೆ ಮರಳಿ ನನ್ನ ರಾಜಕೀಯ ಜೀವನವನ್ನು ಮತ್ತೆ ಶುರು ಮಾಡುತ್ತಿದ್ದೇನೆ ಎಂದು ಸಂತೋಷ ವ್ಯಕ್ತಪಡಿಸಿದ್ದಾರೆ.
ಜನಪರ ಯೋಜನೆಗಳನ್ನು ಕಾಂಗ್ರೆಸ್ ಕೊಡುತ್ತಿದೆ ಈತರ ಸರ್ಕಾರದ ಜೊತೆ ನಾನು ಕೆಲಸಗಳನ್ನು ಮಾಡದೆ ಸುಮ್ಮನೆ ಉಳಿದುಬಿಡುತ್ತೇನೆ ಎಂಬ ಆತಂಕ ಇತ್ತು ಆದರೆ ಈಗ ಆ ಆತಂಕ ಇಲ್ಲ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದೇನೆ. ಸರ್ಕಾರ ಜೊತೆ ಜನಪರ ಕೆಲಸ ಮಾಡುತ್ತೇನೆ ಎಂದಿದ್ದಾರೆ.
ಯಾವುದೇ ಕಂಡಿಷನ್ ಇಲ್ಲದೆ ಕಾಂಗ್ರೆಸ್ ಗೆ ಸೇರಿದ್ದೇನೆ. ಕದ್ದುಮುಚ್ಚಿ ಕಾಂಗ್ರೆಸ್ ಪಕ್ಷಕ್ಕೆ ಸೇರಿಕೊಳ್ಳುವ ಅಗತ್ಯವಿಲ್ಲ. ಬೆಳಗ್ಗೆ ನೇರವಾಗಿ ಡಿಕೆಶಿ ಮನೆಗೆ ಹೋಗಿ ಭೇಟಿಯಾಗಿದ್ದೆ. ನಂತರ ನನ್ನ ವಿಚಾರ ತಿಳಿಸಿ ಸಿಎಂರನ್ನು ಭೇಟಿಯಾಗಿದ್ದೆ. ನಂತರ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರ ಜೊತೆ ಮಾತನಾಡಿದೆ ಶುಭ ಕೋರಿದ್ದರು. ಅಭಿವೃದ್ಧಿ ದೃಷ್ಟಿಯಿಂದ ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದೇನೆ ಎಂದಿದ್ದಾರೆ.
ರಾಮನಗರ ಜಿಲ್ಲೆ ಅಭಿವೃದ್ಧಿಗಾಗಿ ಕಾಂಗ್ರೆಸ್ ಸೇರಿದ್ದೇನೆ. ಡಿಕೆಶಿ, ರಾಮಲಿಂಗಾರೆಡ್ಡಿ ಹಲವು ಯೋಜನೆ ಕೊಟ್ಟಿದ್ದಾರೆ. ಆ ಕಾರ್ಯಕ್ರಮಗಳಲ್ಲಿ ನಾನಿಲ್ಲ ಎಂಬ ಭಾವನೆ ಇತ್ತು. ಇದೇ ಕಾರಣಕ್ಕೆ ನಾನು ಕಾಂಗ್ರೆಸ್ ಪಕ್ಷಕ್ಕೆ ಸೇರಿಕೊಂಡಿದ್ದೇನೆ. ಸ್ವಯಂಪ್ರೇರಿತನಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರಿಕೊಂಡಿದ್ದೇನೆ ಎಂದಿದ್ದಾರೆ.
ಕಾಂಗ್ರೆಸ್ ಪಕ್ಷವನ್ನು ಸಂಘಟಿಸುತ್ತಿರುವ ಚನ್ನಪಟ್ಟಣ ಕಾರ್ಯಕರ್ತರಿಗೆ ನಾಯಕರಿಗೆ ಧನ್ಯವಾದ ಇನ್ನು ಮುಂದೆ ನಾನು ನಿಮ್ಮ ಜೊತೆ ಇರುತ್ತೇನೆ.. ಕಾರ್ಯಕರ್ತನಾಗಿ ಕಾಂಗ್ರೆಸ್ ಬಲ ಪಡಿಸುವ ಕೆಲಸ ಮಾಡುತ್ತೇನೆ ಎಂದು ಹೇಳಿದ್ದಾರೆ.