ಕಾವೇರಿಯ ಹನಿ ಹನಿ ನೀರು ಕೂಡ ಮುಂದಿನ ಜನಾಂಗದ ಉಸಿರು, ನಮ್ಮ ಪಾಲಿನ ಒಂದು ಹನಿ ನೀರು ವ್ಯರ್ಥವಾಗದಂತೆ ಯೋಜನೆ ರೂಪಿಸಿ ಕಾಪಾಡೋಣ ಎಂದು ಮಂಡ್ಯ ಯೂತ್ ಗ್ರೂಪ್ ಕಾರ್ಯಕರ್ತರು ಮಂಡ್ಯ ನಗರದಲ್ಲಿ ಬುಧವಾರ ಸಂಜೆ ಪಂಜಿನ ಮೆರವಣಿಗೆ ನಡೆಸಿದರು.
ಮಂಡ್ಯನಗರದ ಹೊಸಹಳ್ಳಿ ವೃತ್ತದಲ್ಲಿ ಸೇರಿದ ಗ್ರೂಪ್ನ ಸದಸ್ಯರು ಪಂಜುಗಳನ್ನು ಹಿಡಿದು ಮೆರವಣಿಗೆ ಹೊರಟು ವಿ.ವಿ.ರಸ್ತೆ ಮಾರ್ಗವಾಗಿ ನಗರಸಭೆ ವೃತ್ತ ತಲುಪಿ ಅಲ್ಲಿಂದ ಹೆದ್ದಾರಿ ಮೂಲಕ ಸಂಝ
ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಪ್ರತಿಭಟಿಸಿದರು.
ಗ್ರೂಪ್ ಅಧ್ಯಕ್ಷ ಡಾ.ಅನಿಲ್ ಆನಂದ್ ಮಾತನಾಡಿ, ಒಂದು ವರ್ಷ ಕಾಲಮಿತಿಯೊಳಗೆ ಸಂಕಷ್ಟ ಸೂತ್ರ ರೂಪಿಸಿ, ರಾಜಸ್ಥಾನ ಮಾದರಿಯಲ್ಲಿ ಚೆಕ್ ಡ್ಯಾಂ ಮತ್ತು ಸಣ್ಣ ಜಲಾಶಯಗಳನ್ನು ನಿರ್ಮಿಸಲು ಸರ್ಕಾರ ಕ್ರಮ ವಹಿಸಬೇಕೆಂದು ಆಗ್ರಹಿಸಿದರು. ಶತಮಾನಗಳಿಂದಲೂ ಕಾವೇರಿ ವಿಚಾರದಲ್ಲಿ ಕರ್ನಾಟಕಕ್ಕೆ ನ್ಯಾಯ ದೊರಕಿಲ್ಲ. ಕರ್ನಾಟಕದ ನ್ಯಾಯ ಕತ್ತಲಲ್ಲೇ ಅಡಗಿದೆ. ಅದನ್ನು ಈಗಲಾದರೂ ಬೆಳಕಿಗೆ ತರುವ ಪ್ರಯತ್ನಕ್ಕೆ ಸರ್ಕಾರ ಕಾರ್ಯೋನ್ಮುಖವಾಗಬೇಕಿದೆ ಎಂದು ಆಗ್ರಹಿಸಿದರು.
ರಾಜ್ಯ ಸರ್ಕಾರ ಕಾವೇರಿ ವಿಚಾರವಾಗಿ ಜನರು ಮತ್ತು ರೈತರ ಹಿತ ಕಾಪಾಡಲು ಕಾನೂನು ಹೋರಾಟವನ್ನು ತೀವ್ರಗೊಳಿಸಬೇಕಿದೆ. ನೀರಾವರಿ ತಜ್ಞರ ಸಮಿತಿ ರಚಿಸುವುದರೊಂದಿಗೆ ಕಾನೂನು ತಜ್ಞರ ಸಮಿತಿಯನ್ನು ರಚಿಸುವ ತುರ್ತು ಅಗತ್ಯವಿದೆ. ಕಾಲ ಕಾಲಕ್ಕೆ ಸಮಿತಿಗಳಿಂದ ನೀರಿನ ಬಳಕೆ ವಿಚಾರವಾಗಿ, ಕಾನೂನು ಹೋರಾಟದ ಸಂಬಂಧ ವರದಿಯನ್ನು ಪಡೆದುಕೊಂಡು ನಮ್ಮ ನೀರಿನ ಹಕ್ಕನ್ನು ಉಳಿಸಿಕೊಳ್ಳಬೇಕಾದ ಜವಾಬ್ದಾರಿ ಸರ್ಕಾರದ ಮೇಲಿದೆ ಎಂದು ತಿಳಿಸಿದರು.
ಪ್ರತಿಭಟನೆಯಲ್ಲಿ ದರ್ಶನ್,ಸಂತೋಷ್, ಮಂಜು,ಹರೀಶ್, ರವಿ, ಶಶಿ, ಸಂದೀಪ್,ವಿನಯ್, ರಕ್ಷಿತ್, ಸ್ಟುಡಿಯೋ ಮಂಜು,ನಂದೀಶ್,ಪ್ರತಾಪ್, ಸೈಯದ್,ನವೀನ್, ಸಂದೀಪ್ ಲೋಕಸರ, ಮಲ್ಲೇಶ್, ಕಡಿಲುವಾಗಿಲು ನಿಂಗೇಗೌಡ ಇತರರಿದ್ದರು.