ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ 150 ಕ್ಷೇತ್ರದಲ್ಲಿ ಗೆಲುವು ಸಾಧಿಸುವುದೇ ಬಿಜೆಪಿಯ ಗುರಿಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಸದಾನಂದಗೌಡ ತಿಳಿಸಿದರು.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಾಧನೆಗಳ ಬಗ್ಗೆ ಜಾಗೃತಿ ಮೂಡಿಸುವುದು ವಿಜಯಸಂಕಲ್ಪ ಯಾತ್ರೆಯ ಉದ್ದೇಶವಾಗಿದೆ ಎಂದು ನುಡಿದರು.
ಸಕಾಲ ಉತ್ತಮ ಯೋಜನೆಯಾಗಿದೆ. ಲತಾ ಎಂಬ ಅಧಿಕಾರಿ ಇತ್ತೀಚೆಗೆ 61 ಸಾವಿರ ಅರ್ಜಿಗಳನ್ನು ಇತ್ಯರ್ಥ ಪಡಿಸಿದ್ದಾರೆ. ಆದರೆ ಅದರ ವೇಗ ಕುಂಠಿತವಾಗಿದೆ ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು. ಮೈಷುಗರ್ ಗೆ 50 ಕೋಟಿ ಅನುದಾನ ಬಿಡುಗಡೆಯಾಗದಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸರ್ಕಾರ ಹಣ ಬಿಡುಗಡೆ ಮಾಡಿದೆ. ಮುಚ್ಚುವ ಹಂತದಲ್ಲಿದ್ದ ಕಾರ್ಖಾನೆಯನ್ನು ಉಳಿಸಿ ರೈತರಿಗೆ ಅನುಕೂಲ ಮಾಡಿಕೊಡಲಾಗಿದೆ ಎಂದರು.
ಜೆಡಿಎಸ್ ನ 123, ಕಾಂಗ್ರೆಸ್ ನ 131 ಸೀಟ್ ಗೆಲ್ಲುವ ಗುರಿ ಹೊಂದಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಮ್ಮದು 150 ಕ್ಷೇತ್ರದಲ್ಲಿ ಗೆಲ್ಲುವ ಟಾರ್ಗೆಟ್ ಹೊಂದಿದ್ದು ಈ ಬಾರಿಯೂ ಗೆಲುವು ನಿಶ್ಚಿತ ಎಂದರು.
ಗೋಷ್ಠಿಯಲ್ಲಿ ಸಚಿವ ಅಂಗಾರ, ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ಶಾಸಕ ಮಹೇಶ್, ಬಿಜೆಪಿ ರಾಜ್ಯ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾನ, ಜಿಲ್ಲಾಧ್ಯಕ್ಷ ಉಮೇಶ್, ಚಂದಗಾಲು ಶಿವಣ್ಣ, ಅಶೋಕ್ ಜಯರಾಂ, ಡಾ.ಸಿದ್ದರಾಮಯ್ಯ ಮತ್ತಿತರರಿದ್ದರು.