ಕಳೆದ ಇಪ್ಪತ್ತು ವರ್ಷಗಳಿಂದ ಗೆದ್ದು ಹೋದವರು ಒಂದು ಚರಂಡಿಯನ್ನೂ ಕೂಡ ಮಾಡಿಸಿಲ್ಲ.ಇಂದು ಸಂತೆಕಸಲಗೆರೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ 4 ಕೋಟಿ ರೂ.ಗಳ ವೆಚ್ಚದಲ್ಲಿ ರಸ್ತೆ, ಚರಂಡಿ,ಬಸ್ ನಿಲ್ದಾಣ ಮೊದಲಾದ ಕಾಮಗಾರಿಗಳಿಗೆ ಗುದ್ದಲಿ ಪೂಜೆ ಮಾಡುತ್ತಿದ್ದೇನೆ ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯ ತಿಳಿಸಿದರು.
ಮಂಡ್ಯ ತಾಲ್ಲೂಕಿನ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಾರಸವಾಡಿ, ಸಂತೆಕಸಲಗೆರೆ, ಹನಿಯಂಬಾಡಿ ಹಾಗೂ ಮಂಡ್ಯ ನಗರದ ವಿನಾಯಕ ಬಡಾವಣೆಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಕಳೆದ ಇಪ್ಪತ್ತು ವರ್ಷಗಳಿಂದ ಈ ಭಾಗದಲ್ಲಿ ರಸ್ತೆ ಇರಲಿ, ಒಂದು ಚರಂಡಿ ಕೂಡ ಮಾಡಿಲ್ಲ. ಗೆದ್ದವರು ಒಂದು ಚರಂಡಿ ಮಾಡಿಸಿದ್ರೂ ಸ್ವಲ್ಪವಾದ್ರೂ ಅಭಿವೃದ್ಧಿ ಆಗ್ತಿತ್ತು. ನಾನು ಇಂದು 4 ಕೋಟಿ ರೂ. ವೆಚ್ಚದ ಕಾಮಗಾರಿ ತಂದು ಕೆಲಸ ಮಾಡಿಸುತ್ತಿದ್ದೇನೆ. ಈ ಹಿಂದೆ ಇದ್ದವರು ಏನೂ ಅಭಿವೃದ್ಧಿ ಮಾಡದೆ ಮದುವೆ, ಮುಂಜಿ,ತಿಥಿ ಅಂತೆಲ್ಲಾ ಸುತ್ತಾಡಿ, ಜನರಿಗೆ ಮೋಸ ಮಾಡಿದ್ದಾರೆಂದು ಯಾರ ಹೆಸರನ್ನು ಹೇಳದೆ ವ್ಯಂಗ್ಯವಾಡಿದರು.
ಕಳೆದ ಎರಡು ವರ್ಷ ಕೋವಿಡ್ನಿಂದಾಗಿ ಅಭಿವೃದ್ಧಿ ಕಾರ್ಯಗಳು ನಡೆದಿರಲಿಲ್ಲ. ಅಲ್ಲದೆ ಈಗ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ರಸ್ತೆಗಳು ಸಂಪೂರ್ಣ ಹಾಳಾಗಿವೆ. ಪ್ರಸ್ತುತ ಮಳೆ ಕಡಿಮೆಯಾಗಿರುವುದರಿಂದ ರಸ್ತೆಗಳ ದುರಸ್ತಿಗೆ ಮುಂದಾಗಿದ್ದು, ಹಂತ-ಹಂತವಾಗಿ ಎಲ್ಲ ರಸ್ತೆಗಳನ್ನು ದುರಸ್ತಿ ಮಾಡಲಾಗುವುದು ಎಂದರು.
ಸಂತೆಕಸಲಗೆರೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಮಂಡ್ಯ ನಗರದ ವಿನಾಯಕ ಬಡಾವಣೆಯಲ್ಲಿ 50 ಲಕ್ಷ ರೂ ವೆಚ್ಚದ ರಸ್ತೆ ಕಾಮಗಾರಿ, ಕಾರಸವಾಡಿ ಗ್ರಾಮದಲ್ಲಿ ಜಲಜೀವನ್ ಯೋಜನೆಯಡಿ 1.40 ಕೋಟಿ ರೂ. ವೆಚ್ಚದ ಕುಡಿಯುವ ನೀರಿನ ಟ್ಯಾಂಕ್ಗಳು ಮತ್ತು ಪೈಪ್ಲೈನ್ ಕಾಮಗಾರಿ, 5 ಲಕ್ಷ ವೆಚ್ಚದ ಬಸ್ ನಿಲ್ದಾಣ, 42 ಲಕ್ಷದ ರಸ್ತೆ ಕಾಮಗಾರಿ, ಕಾತ್ಯಾಯಿನಿ ದೇವಸ್ಥಾನ ಮತ್ತು ಮಂಚಮ್ಮ ದೇವಸ್ಥಾನ ನಿರ್ಮಾಣ ಕಾಮಗಾರಿಗೆ ಭೂಮಿ ಶಾಸಕರು ಪೂಜೆ ನೆರವೇರಿಸಿದರು.
ಪೂರ್ಣಕುಂಭ ಸ್ವಾಗತ
ಕಾರಸವಾಡಿ ಗ್ರಾಮದಲ್ಲಿ ಸುಮಾರು 2 ಕೋಟಿ ರೂ.ಗೂ ಅಧಿಕ ವೆಚ್ಚದ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆಗೆ ಆಗಮಿಸಿದ ಶಾಸಕ ರವೀಂದ್ರ ಶ್ರೀಕಂಠಯ್ಯ ಅವರನ್ನು ಗ್ರಾಮಸ್ಥರು ಡೊಳ್ಳು ಕುಣಿತ, ಪೂರ್ಣಕುಂಭ ಹಾಗೂ ಪೂಜಾಕುಣಿತದ ಮೆರವಣಿಗೆಯೊಂದಿಗೆ ಕರೆತಂದರು.
ಈ ಸಂದರ್ಭದಲ್ಲಿ ಸಂತೆಕಸಲಗೆರೆ ಗ್ರಾ.ಪಂ.ಅಧ್ಯಕ್ಷೆ ಸೌಮ್ಯ ನಟರಾಜು, ಸದಸ್ಯರಾದ ಬಸವರಾಜು (ಸೋಡಿ) ಕೆ.ಬಿ.ರವೀಶ್, ಶಿವಲಿಂಗಶೆಟ್ಟಿ, ಸೌಮ್ಯ ರಾಜೇಶ್, ಪಾರ್ವತಮ್ಮ, ಸಾಕಮ್ಮ, ಲಕ್ಷ್ಮಿ, ಮಮತ, ಮಾಜಿ ಅಧ್ಯಕ್ಷ ಲಿಂಗಣ್ಣ, ಗುತ್ತಿಗೆದಾರರಾದ ನರೇಂದ್ರ, ನಟರಾಜು, ಮುಖಂಡರಾದ ರಾಕೇಶ್, ಅಂಗಡಿ ಶಂಕರಣ್ಣ, ಪಾಪಣ್ಣ, ಕೆಆರ್ಐಡಿಎಲ್ ಎಇಇ ಸೋಮಶೇಖರ್. ಎಇ ರಾಜೇಂದ್ರ, ಇಂಜಿನಿಯರ್ ರಾಹುಲ್ ಮತ್ತಿತರರಿದ್ದರು.