ರಾಜ್ಯದ ವಿವಿಧೆಡೆ ಬರೋಬರಿ ₹ 10 ಲಕ್ಷ ರೂ. ಮೌಲ್ಯದ 22 ಬೈಕ್ ಗಳನ್ನು ಕಳವು ಮಾಡಿದ್ದ ಖದೀಮನನ್ನು ಬಂಧಿಸಿರುವ ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆ ಪೊಲೀಸರು ಆತನಿಂದ ಎಲ್ಲಾ ಬೈಕ್ ಗಳನ್ನು ವಶಕ್ಕೆ ಪಡೆದಿದ್ದಾರೆ.
ನಾಗಮಂಗಲ ತಾಲ್ಲೂಕಿನ ಹೂವಿನಹಳ್ಳಿ ಗ್ರಾಮದ ಆರೋಪಿ ಲೋಕೇಶ್ ಹೆಚ್.ವಿ ಎಂಬುವನನ್ನು ಪೊಲೀಸರು ಬಂಧಿಸಿದ್ದಾರೆ.
ಘಟನೆ ವಿವರ
ಕಳೆದ ಏ.5, 2023ರಂದು ನಾಗಮಂಗಲ ತಾಲ್ಲೂಕಿನ ಪಿ. ಮಲ್ಲೇನಹಳ್ಳಿ ಗ್ರಾಮದ ಮರೀಗೌಡ ಎಂಬುವವರು ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆಗೆ ಹಾಜರಾಗಿ ಮಾ.25, 2023 ರಂದು ನಾಗಮಂಗಲ ತಾಲ್ಲೂಕು ಬೋಗಾದಿ ಸಂತೆಬೋರೆಯಲ್ಲಿ ನಿಲ್ಲಿಸಿದ್ದ ತನ್ನ ಬೈಕ್ನ್ನು, ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದಾರೆಂದು ದೂರು ನೀಡಿದ್ದರು.
ಈ ಸಂಬಂಧ ಮಂಡ್ಯ ಜಿಲ್ಲಾ ಅಪರ ಪೊಲೀಸ್ ಅಧೀಕ್ಷಕ ಈ ತಿಮ್ಮಯ್ಯ ಅವರ ಮಾರ್ಗದರ್ಶನದಲ್ಲಿ, ನಾಗಮಂಗಲ ಡಿಎಸ್ಪಿ ಲಕ್ಷ್ಮೀನಾರಾಯಣ ಪ್ರಸಾದ್, ವೃತ್ತದ ಸಿ.ಪಿ.ಐ ನಿರಂಜನ್ ಕೆ.ಎಸ್ ಅವರ ನೇತೃತ್ವದಲ್ಲಿ ನಾಗಮಂಗಲ ಗ್ರಾಮಾಂತರ ಠಾಣಾ ಪಿ.ಎಸ್.ಐ ರವಿಕುಮಾರ್, ಎ.ಎಸ್.ಐ ಟಿ.ಲಿಂಗರಾಜು, ಸಿಬ್ಬಂದಿಯವರಾದ ನಟೇಶ ಬಾಬು, ಸಿದ್ದಪ್ಪ, ಸಂದೀಪ, ಶಶಿಕುಮಾರ್, ಪ್ರಸಾದ್, ನಾಯಕ್, ಚೇತನ್ ಮುಂತಾದ ಅಧಿಕಾರಿ ಹಾಗೂ ಸಿಬ್ಬಂದಿಗಳ ತಂಡ ರಚನೆ ಮಾಡಲಾಗಿತ್ತು.
ಈ ತಂಡವು ನಾಗಮಂಗಲ ತಾಲ್ಲೂಕಿನ ಹೂವಿನಹಳ್ಳಿ ಗ್ರಾಮದಲ್ಲಿ ಆರೋಪಿಯನ್ನು ಪತ್ತೆ ಮಾಡಿ ವಶಕ್ಕೆ ಪಡೆದು ವಿಚಾರಣೆಗೆ ಒಳಪರಿಸಿದಾಗ ಆರೋಪಿಯು ಹಲವು ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಬೈಕ್ ಗಳನ್ನು ಕಳವು ಮಾಡಿರುವುದನ್ನು ಬಾಯ್ಬಿಟ್ಟಿದ್ದಾನೆ.
ಈ ಆರೋಪಿಯು ನಾಗಮಂಗಲ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ 2 ಪ್ರಕರಣಗಳು, ಬೆಳ್ಳೂರು ಪೊಲೀಸ್ ಠಾಣೆಯಲ್ಲಿ 2, ಬಿಂಡಿಗನವಿಲೆ ಪೊಲೀಸ್ ಠಾಣೆಯಲ್ಲಿ 1, ಕಿಕ್ಕೇರಿ ಪೊಲೀಸ್ ಠಾಣೆಯಲ್ಲಿ 2, ಬೆಂಗಳೂರು ಕಾಮಾಕ್ಷಿ ಪಾಳ್ಯ ಪೊಲೀಸ್ ಠಾಣೆಯಲ್ಲಿ 4, ಬೆಂಗಳೂರು ರಾಜಗೋಪಾಲ ನಗರ ಪೊಲೀಸ್ ಠಾಣೆಯಲ್ಲಿ 1, ಬೆಂಗಳೂರು ಬ್ಯಾಡರಹಳ್ಳಿ ಠಾಣೆಯಲ್ಲಿ 1 ಹಾಗೂ ಪೀಣ್ಯಾ ಪೊಲೀಸ್ ಠಾಣೆಯಲ್ಲಿ 1 ಪ್ರಕರಣಗಳಲ್ಲಿ ಭಾಗಿಯಾಯಾಗಿರುವುದಾಗಿ ತಿಳಿದುಬಂದಿದೆ.
ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣಾ ಅಧಿಕಾರಿಗಳು ಮತ್ತು ಸಿಬ್ಬಂದಿಯವರ ಈ ಕಾರ್ಯವನ್ನು ಮಂಡ್ಯ ಜಿಲ್ಲಾ ಪೊಲೀಸ್ ಅಧೀಕ್ಷಕರು ಶ್ಲಾಘಿಸಿ ಪ್ರಶಂಸಿಸಿದ್ದಾರೆ.