ಮಳವಳ್ಳಿ ತಾಲೂಕು ಕಿರಗಾವಲು ಸಂತೆಮಾಳದಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ರಕ್ತನಿಧಿ ಕೇಂದ್ರ ಮಿಮ್ಸ್ ಮಂಡ್ಯ, ನೆಲದನಿ ಬಳಗ ಮಂಗಲ, ಜೈ ಭುವನೇಶ್ವರಿ ಆಟೋ ಚಾಲಕರ ಸಂಘ ಮತ್ತು ಡಾ.ಬಿ ಕೆ ಶಶಿಧರ್ ಧನ್ವಂತರಿ ಕ್ಲಿನಿಕ್ ಇವರ ಆಶ್ರಯದಲ್ಲಿ ರಕ್ತದಾನ ಶಿಬಿರ ಯಶಸ್ವಿಯಾಗಿ ನಡೆಯಿತು. 30 ಯುನಿಟ್ ರಕ್ತದಾನ ಸಂಗ್ರಹ ಮಾಡಲಾಯಿತು.
ಮಳವಳ್ಳಿ ತಾಲೂಕು ಆರೋಗ್ಯ ಅಧಿಕಾರಿ ಡಾ. ವೀರಭದ್ರಪ್ಪ ಉದ್ಘಾಟಿಸಿ ಮಾತನಾಡಿ, ಇಂದಿನ ದಿನಗಳಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ರಕ್ತದಾನ ಶಿಬಿರಗಳು ಕಡಿಮೆಯಾಗುತ್ತಿದ್ದು, ಯುವಜನರು ಈ ರೀತಿ ರಕ್ತದಾನ ಶಿಬಿರ ಹೆಚ್ಚು ಹೆಚ್ಚು ಮಾಡಬೇಕೆಂದು ತಿಳಿಸಿದರು.
ನೆಲದನಿ ಬಳಗ ಅಧ್ಯಕ್ಷ ಎಂ ಸಿ ಲಂಕೇಶ್ ಮಾತನಾಡಿ ಇತ್ತೀಚಿನ ದಿನಗಳಲ್ಲಿ ನಾಡು ನುಡಿ ಭಾಷೆ ಜಲ ವಿಚಾರಗಳಲ್ಲಿ ಸಾರ್ವಜನಿಕರಲ್ಲಿ ನಿರಾಸಕ್ತಿ ಮೂಡಿದೆ. ಕನ್ನಡ ನುಡಿ ವಿಚಾರದಲ್ಲಿ ಸ್ವಯಂ ಪ್ರೇರಿತರಾಗಿ ನಿರಂತರವಾಗಿ ಹೋರಾಡುತ್ತಿರುವವರು ಆಟೋ ಚಾಲಕರು, ಇವರ ಭಾಷಾ ಪ್ರೇಮ ಸಮಾಜಕ್ಕೆ ಮಾದರಿಯಾಗಿದೆ. ಕಾವೇರಿ ಜಲವಿವಾದದ ವಿಚಾರದಲ್ಲಿ ಮತ್ತು ಗಡಿನಾಡು ಭಾಷೆಯ ವಿಚಾರದಲ್ಲಿ ಹೋರಾಟ ನಡೆಸುತ್ತಿರುತ್ತಾರೆ ಇವರಿಂದ ದೇಶಪ್ರೇಮ ಇನ್ನೂ ಉಳಿದುಕೊಂಡಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಧನ್ವಂತರಿ ಕ್ಲಿನಿಕ್ ಡಾ.ಬಿ ಕೆ ಶಶಿಧರ್, ಆಟೋ ಚಾಲಕರ ಸಂಘದ ಅಧ್ಯಕ್ಷ ಮಧುಕುಮಾರ್, ಉಪಾಧ್ಯಕ್ಷ ಜಯಶಂಕರ್, ಮುಖಂಡರಾದ ದೇವರಾಜ್, ನಾಗೇಂದ್ರ, ಪ್ರಕಾಶ್ ಗೌಡ, ಎ ಎಸ್ ಐ ಸಿದ್ದರಾಜು, ರಕ್ತನಿಧಿ ಕೇಂದ್ರದ ಡಾ.ಪ್ರಸೀಲ ರಫಿ, ಆಟೋ ಚಾಲಕರು ಮತ್ತು ಮಾಲೀಕರು ಇತರರು ಭಾಗವಹಿಸಿದ್ದರು.