ಕರ್ನಾಟಕ ರಾಜ್ಯದಾದ್ಯಂತ ಸುಮಾರು 1.18 ಲಕ್ಷ ನೌಕರರಿಗೆ ಸುಮಾರು 500 ಕೋಟಿ ರೂ.ಗಳ ವೇತನ ಬಾಕಿಯನ್ನು ಪಾವತಿ ಮಾಡದೇ, ಬಿಜೆಪಿ ಸರ್ಕಾರ ಅವರ ಬದುಕಿನ ಜೊತೆ ಚೆಲ್ಲಾಟವಾಡುತ್ತಿದೆ ಎಂದು ಕಾಂಗ್ರೆಸ್ ನಾಯಕ ಎನ್.ಚಲುವರಾಯಸ್ವಾಮಿ ವಾಗ್ದಾಳಿ ನಡೆಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇವಲ 5-6 ಸಾವಿರ ಲೆಕ್ಕದಲ್ಲಿ ದುಡಿಯುವ ಬಡ ನೌಕರರ ಹಣವನ್ನು ಪಾವತಿ ಮಾಡಲು ಸರ್ಕಾರದ ಬಳಿ ಹಣವಿಲ್ಲವಾಗಿದೆ, ಇಡೀ ಸರ್ಕಾರದ ಸಚಿವರು ಭ್ರಷ್ಟಾಚಾರದ ಮೂಲಕ ಪರ್ಸೆಂಟೇಜ್ ರಾಜಕಾರಣದಲ್ಲಿ ಮುಳುಗಿದ್ದಾರೆ. ಬಿಸಿಯೂಟ ನೌಕರರು ಇದೇ ಹಣವನ್ನು ನಂಬಿಕೊಂಡು ದುಡಿಯುತ್ತಿದ್ದಾರೆ, ಸರ್ಕಾರವೇ ವೇತನ ನೀಡದಿದ್ದರೆ ಅವರ ಜೀವನ ಹೇಗೆ ನಡೆಯುತ್ತದೆ ಎಂದು ಪ್ರಶ್ನಿಸಿದರು.
3 ವರ್ಷದಿಂದ ಶಾಲಾ ಮಕ್ಕಳಿಗೆ ಸೈಕಲ್- ಸ್ಕಾಲರ್ ಶಿಪ್ ಕೊಟ್ಟಿಲ್ಲ
ರಾಜ್ಯ ಸರ್ಕಾರವು ಬಡವರಿಗೆ ಕಳೆದ 3 ವರ್ಷಗಳಿಂದ ಶಾಲಾ ಮಕ್ಕಳಿಗೆ ಸೈಕಲ್ ವಿತರಣೆ ಮಾಡಿಲ್ಲ, ಇದರಿಂದ ಲಕ್ಷಾಂತರ ಮಕ್ಕಳು ಶಾಲೆಗೆ ನಡೆದುಕೊಂಡೇ ಹೋಗಬೇಕಾದ ಪರಿಸ್ಥಿತಿ ಉಂಟಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಪ್ರೌಢಶಾಲೆಗಳು ಕನಿಷ್ಠ 3-4 ಕೊಟ್ಟಿಲ್ಲ, ಅಲ್ಲದೇ ಎಸ್.ಎಸ್.ಎಲ್.ಸಿ, ಪಿಯುಸಿ ಹಾಗೂ ಪದವಿ ತರಗತಿಗಳಲ್ಲಿ ಮೊದಲ ಪ್ರಯತ್ನದಲ್ಲೇ ಉತ್ತೀರ್ಣರಾಗುತ್ತಿದ್ದ, ಎಸ್.ಸಿ. ಎಸ್.ಟಿ. ಸಮುದಾಯದ ಮಕ್ಕಳಿಗೆ ನೀಡುತ್ತಿದ್ದ ಬಹುಮಾನದ ರೂಪದ ಹಣವನ್ನು ನೀಡಿಲ್ಲ, ಅಲ್ಲದೇ ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್ ನೀಡಿಲ್ಲ ಎಂದು ದೂರಿದರು.
ಶಾಲಾ ವಿದ್ಯಾರ್ಥಿಗಳಿಗೆ ಸರಿಯಾಗಿ ಪಠ್ಯ ಪುಸ್ತಕ ವಿತರಣೆ ಮಾಡಿಲ್ಲ, ಇದರಿಂದ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ತೀವ್ರ ರೀತಿಯ ತೊಂದರೆಗಳಾಗಿವೆ. ಶಾಲಾ ಕಾಲೇಜುಗಳ ಅಭಿವೃದ್ಧಿಗೆ ಒತ್ತು ನೀಡುತ್ತಿಲ್ಲ ಎಂದು ಆರೋಪಿಸಿದರು.