-
ಕುಣಿದು ಕುಪ್ಪಳಿಸಿ ಸಂಭ್ರಮಿಸಿದ ಸ್ವಚ್ಚತಾ ಕಾರ್ಮಿಕರು
- ಸಾಥ್ ನೀಡಿದ ಡೊಳ್ಳು ಕುಣಿತ-ತಮಟೆ ವಾದನ
ದಿನನಿತ್ಯ ಬೆಳಿಗ್ಗೆ ಬೇಗ ಎದ್ದು ಮಂಡ್ಯ ನಗರದ ಬೀದಿಗಳನ್ನು ಗುಡಿಸಿ ಸ್ವಚ್ಛಗೊಳಿಸಿ ಸುಂದರವಾಗಿಡುವ ಪೌರಕಾರ್ಮಿಕರಿಗೆ ಎಷ್ಟು ಧನ್ಯವಾದಗಳನ್ನು ಹೇಳಿದರೂ ಕಡಿಮೆಯೇ, ಮಳೆ, ಗಾಳಿ, ಚಳಿ, ಬಿಸಿಲೆನ್ನದೆ ತಮ್ಮ ಕಾಯಕ ಮಾಡುವ ಪೌರಕಾರ್ಮಿಕರ ಸೇವೆ ಅನ್ಯನ್ಯವಾದದ್ದು, ಇಂತಹ ಕಾರ್ಮಿಕರು ಪೌರಕಾರ್ಮಿಕರ ದಿನಾಚರಣೆಯ ಅಂಗವಾಗಿ ಮಂಡ್ಯ ನಗರದಲ್ಲಿ ಶುಕ್ರವಾರ ಕುಣಿದು, ಕುಪ್ಪಳಿಸಿ ಸಂಭ್ರಮಿಸಿದರು.
ಮಂಡ್ಯ ನಗರಸಭೆಯಲ್ಲಿ ಕಾರ್ಯನಿರ್ವಹಿಸುವ ಖಾಯಂ ಹಾಗೂ ನೇರ ಪಾವತಿ ಪೌರಕಾರ್ಮಿಕರು ದಿನನಿತ್ಯದ ಎಲ್ಲಾ ಜಂಜಾಟವನ್ನು ಮರೆತು ಶುಭ್ರವಾದ ವಸ್ತ್ರಗಳನ್ನು ಧರಿಸಿ ಬಂದು, ಮೈಮರೆತು ಪಾಲ್ಗೊಂಡು ಹಾಡಿ, ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು.
ನಗರಸಭೆಯ ಆರೋಗ್ಯ ಅಧೀಕ್ಷಕರು, ಎಲ್ಲಾ ಅಧಿಕಾರಿಗಳು ಸಿಬ್ಬಂದಿಗಳು ಕೂಡ ಪೌರಕಾರ್ಮಿಕರ ಜೊತೆಗೂಡಿ ಸಂಭ್ರಮ, ಸಂತೋಷದಿಂದ ಹೆಜ್ಜೆ ಹಾಕಿದರು.
ನಗರಸಭೆಯ ಆವರಣದಲ್ಲಿ ಜಮಾವಣೆಗೊಂಡ ಪೌರಕಾರ್ಮಿಕರು ಹಾಗೂ ನಗರಸಭೆ ಸಿಬ್ಬಂದಿಗಳು ವಿ.ವಿ. ರಸ್ತೆಯ ಮೂಲಕ ಹೊಸಹಳ್ಳಿ ವೃತ್ತ, ನೂರಡಿ ರಸ್ತೆ, ಆರ್.ಪಿ ರಸ್ತೆಯ ಮೂಲಕ ಅಂಬೇಡ್ಕರ್ ಭವನಕ್ಕೆ ಆಗಮಿಸಿದರು.
ರಸ್ತೆಯುದ್ದಕ್ಕೂ ಡೊಳ್ಳು ವಾದನಕ್ಕೆ,ತಮಟೆ ಸದ್ದಿಗೆ ಸಂತೋಷದಿಂದ ಕುಣಿದು ಸಂಭ್ರಮಿಸಿದರು. .ಮಹಿಳಾ ಪೌರಕಾರ್ಮಿಕರು ಕೂಡ ಹೆಜ್ಜೆ ಹಾಕಿ ಸಾಥ್ ನೀಡಿದರು.
ಪೌರಕಾರ್ಮಿಕರ ಸಂಘದ ಪದಾಧಿಕಾರಿಗಳು, ನಗರಸಭೆ ಸಿಬ್ಬಂದಿಗಳು ಭಾಗವಹಿಸಿದ್ದರು.