ನಗರದೆಲ್ಲೆಡೆ ಜನವೋ ಜನ…ಎಲ್ಲಡೆ ಬಾಳೆ ಡಿಂಡು, ಮಾವಿನ ಸೊಪ್ಪು, ಬೂದು ಕುಂಬಳಕಾಯಿ ಮಾರಾಟ ಜೋರು…ಬಟ್ಟೆ ಬರೆ, ತರಕಾರಿ, ಹೂವು, ಹಣ್ಣುಗಳ ಖರೀದಿಗೆ ಮುಗಿಬಿದ್ದ ಜನತೆ…
ಇವು ಮಂಡ್ಯನಗರಲ್ಲಿ ಕಂಡು ಬಂದ ದೃಶ್ಯಗಳು. ನಾಳೆ ಮತ್ತು ನಾಡಿದ್ದು ಆಯುಧಪೂಜೆ ಹಾಗೂ ವಿಜಯ ದಶಮಿ ಹಬ್ಬದ ಅಂಗವಾಗಿ ಜಿಲ್ಲೆಯ ಜನತೆ ಖರೀದಿ ಭರಾಟೆಯಲ್ಲಿ ತೊಡಗಿದ್ದರು.
ಹಬ್ಬದ ಹಿನ್ನೆಲೆಯಲ್ಲಿ ಎಲ್ಲಾ ಪದಾರ್ಥಗಳ ಬೆಲೆ ತುಸು ಏರಿಕೆ ಕಂಡಿದ್ದು, ವ್ಯಾಪಾರಿಗಳಿಗೆ ಬಂಪರ್ ಬೆಲೆ ಲಭಿಸಿದೆ, ಮಾರು ಹೂವಿಗೆ 130ರಿಂದ 200 ರೂ., ಬೂದುಗುಂಬಳ ಕೆ.ಜಿ.ಗೆ 20 ರೂ., ಉಂಡೆಗೆ 50 ರೂ., ಬಾಳೆಕಂದು ಜೋಡಿಗೆ 30 ರಿಂದ 100 ರೂ. ಮಾವಿನ ಸೊಪ್ಪು ಒಂದು ಕಟ್ಟಿಗೆ 20 ರೂ. ಹೀಗೆ ಭರ್ಜರಿ ವ್ಯಾಪಾರ ನಡೆಯಿತು.
ಮಂಡ್ಯನಗರ ಪ್ರಮುಖ ಸ್ಥಳಗಳಾದ ಮದಾವೀರ ಸರ್ಕಲ್, ಸಂಜಯ ಸರ್ಕಲ್, ಹೊಳಲು ಸರ್ಕಲ್, ಹೊಸಹಳ್ಳಿ ಸರ್ಕಲ್, ನೂರಡಿ ರಸ್ತೆ ಹಾಗೂ ಪೇಟೆ ಬೀದಿಗಳಲ್ಲಿ ಬಾಳೆ ದಿಂಡು, ಮಾವಿನ ಸೊಪ್ಪುನ್ನು ರಾಶಿ ರಾಶಿ ಹಾಕಿ ವ್ಯಾಪಾರದಲ್ಲಿ ತೊಡಗಿರುವ ದೃಶ್ಯ ಕಂಡು ಬಂತು.
ಇನ್ನೂ ರೆಡಿಮೇಡ್ ಬಟ್ಟೆ ಅಂಗಡಿಗಳ ಮುಂದೆ ಭಟ್ಟೆ ಖರೀದಿಗಾಗಿ ಜನತೆ ಮುಗ್ಗಿ ಬಿದ್ದು ಜನಜಂಗುಳಿಯೇ ನೆರೆದಿತ್ತು. ಅಲ್ಲದೇ ಬೇಕರಿಗಳ ಮುಂದೆ ಸ್ವೀಟ್ ಸೇರಿದಂತೆ ಇನ್ನಿತರ ತಿನಿಸುಗಳ ಖರೀದಿಗೆ ಸಾಲುಗಟ್ಟಿ ನಿಂತಿರುವ ದೃಶ್ಯಕಂಡು ಬಂತು.
ಅಲ್ಲದೆ ಪೇಟೆ ಬೀದಿಯಲ್ಲಿ ಅತಿ ಹೆಚ್ಚಿನ ಜನಸಂದಣಿಯಿಂದಾಗಿ ವಾಹನ ಸವಾರರು ಸಂಚರಿಸುವುದಕ್ಕೆ ಕಸರತ್ತು ಮಾಡುವಂತಾಗಿತ್ತು. ಹಣ್ಣು ತರಕಾರಿ ಖರೀದಿಗೂ ಜನ ಮುಗಿ ಬಿದ್ದ ದೃಶ್ಯಗಳು ಕಂಡು ಬಂದವು.
ಆಯುಧಪೂಜೆ ಪ್ರತಿಯೊಂದು ವಾಹನಗಳನ್ನು ಪೂಜೆ ಮಾಡುವುದರಿಂದ ಎಲ್ಲರೂ ವಾಹನಗಳನ್ನು ಸ್ವಚ್ಚಗೊಳಿಸಿ ಪೂಜೆಗೆ ಸಿದ್ದಗೊಳಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.