ರಾಮಾಯಣ ಮಹಾಕಾವ್ಯ ಬರೆಯುವ ಮೂಲಕ ಸತತ ಪರಿಶ್ರಮ ಪಟ್ಟರೆ ಸಾಧನೆ ಮಾಡಬಹುದು ಎಂಬುದನ್ನು ತೋರಿಸಿದ ದಾರ್ಶನಿಕ ಆದಿಕವಿ ಮಹರ್ಷಿ ವಾಲ್ಮೀಕಿ ಅವರನ್ನು ಮರೆಯುವುದು ಅಸಾಧ್ಯ ಎಂದು ಜಿಲ್ಲಾಸ್ಪತ್ರೆಯ ತುರ್ತು ಚಿಕಿತ್ಸಾ ವೈದ್ಯಕೀಯಾಧಿಕಾರಿ ಡಾ.ಯೋಗೇಂದ್ರಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದರು.
ಮಂಡ್ಯ ನಗರದ ಜಿಲ್ಲಾಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಕಚೇರಿಯಲ್ಲಿ ಇಂದು ವೈದ್ಯರು ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಬಳಿಕ ಅವರು ಮಾತನಾಡಿದರು.
ಆದರ್ಶ ಪುರುಷ ಹೇಗಿರಬೇಕೆಂದು ವಿಶ್ವಕ್ಕೆ ರಾಮಾಯಣ ಕಾವ್ಯದ ಮೂಲಕ ಬೆಳಕು ಚೆಲ್ಲಿದ್ದಾರೆ.ಪ್ರತಿ ಮನೆ ಮನೆಯಲ್ಲಿಯೂ ನಡೆಯುವ ಜೀವಂತ ಸತ್ಯಘಟನೆಗಳನ್ನು ರಾಮಾಯಣದಲ್ಲಿ ದಾಖಲಿಸಿ ಲೋಕಕಲ್ಯಾಣಕ್ಕೆ ಸಮರ್ಪಿಸಿರುವುದು ವಿಶ್ವಮಾನ್ಯ ಎಂದು ನುಡಿದರು.
ಇದನ್ನೂ ಓದಿ: ವಾಲ್ಮೀಕಿ ಅವರ ತತ್ವಗಳು ಜಗತ್ತಿಗೆ ಆದರ್ಶ: ಡಾ. ಹೆಚ್.ಎಲ್. ನಾಗರಾಜು
ಪ್ರಸ್ತುತ ರಾಜ್ಯ ಸರ್ಕಾರವು ಶೋಷಿತ ಸಮುದಾಯಗಳ ಹಿತಕಾಯಲು ಮೀಸಲಾತಿಯಲ್ಲಿ ಹೆಚ್ಚಳಮಾಡಿರುವುದು ಶ್ಲಾಘನೀಯ. ನಿವೃತ್ತ ನ್ಯಾಯಮೂರ್ತಿ ನಾಗಮೋಹನ ದಾಸ್ ವರದಿಯನ್ನು ಜಾರಿಮಾಡಿರುವುದು ಉತ್ತಮ ಬೆಳವಣಿಗೆ. ಮತ್ತಷ್ಟು ಪ್ರಗತಿ ಕಾಣಲು ಪ್ರೇರಣೆಯಾಗಿದೆ ಎಂದು ತಿಳಿಸಿದರು.
ವೈದ್ಯಕೀಯ ಅಧೀಕ್ಷಕ ಡಾ.ಶ್ರೀಧರ್, ಸ್ಥಾನಿಕ ವೈದ್ಯಾಧಿಕಾರಿ ಡಾ.ವೆಂಕಟೇಶ್, ಪ್ರಾಂಶುಪಾಲ ಡಾ.ತಮ್ಮಣ್ಣ, ತುರ್ತು ಚಿಕಿತ್ಸಾ ವೈದ್ಯಕೀಯಾಧಿಕಾರಿ ಡಾ.ಯೋಗೇಂದ್ರಕುಮಾರ್, ನರ್ಸ್ಗಳಾದ ಜಲಜಾ, ಅನುಸೂಯ, ಪ್ರಸನ್ನ, ಕುಮಾರಸ್ವಾಮಿ ಮತ್ತಿತರರಿದ್ದರು.