ಕಳೆದ ಒಂದು ತಿಂಗಳಿಂದ ಮಂಡ್ಯ ಜಿಲ್ಲಾಡಳಿತ ಸಾರ್ವಜನಿಕ ಕೆಲಸಗಳನ್ನು ಬಿಟ್ಟು ಯಾತ್ರೆ, ಜಾತ್ರೆ, ಮೇಳದ ಹಿಂದೆ ಬಿದ್ದು ಸುಸ್ತು ಹೊಡೆದಿದೆ.
ಮೊದಲು ಶ್ರೀರಂಗಪಟ್ಟಣದಲ್ಲಿ ಐತಿಹಾಸಿಕ ದಸರಾ ಉತ್ಸವ ಐದು ದಿನಗಳ ಕಾಲ ನಡೆಯಿತು.ಈ ಕಾರ್ಯಕ್ರಮದ ಸಿದ್ಧತೆಯಲ್ಲಿ ಜಿಲ್ಲಾಡಳಿತ ಭಾಗಿಯಾಗಿತ್ತು.
ನಂತರ ಕಾಂಗ್ರೆಸ್ ಪಕ್ಷದ ಧುರೀಣ ರಾಹುಲ್ ಗಾಂಧಿಯವರು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ಪ್ರಾರಂಭಿಸಿರುವ ಭಾರತ್ ಜೋಡೋ ಯಾತ್ರೆ ಮೈಸೂರು ಜಿಲ್ಲೆಯಿಂದ ಮಂಡ್ಯ ಜಿಲ್ಲೆಯನ್ನು ಪ್ರವೇಶಿಸಿ ಶ್ರೀರಂಗಪಟ್ಟಣ, ಪಾಂಡವಪುರ, ನಾಗಮಂಗಲ, ಬೆಳ್ಳೂರು ಮೂಲಕ ತುಮಕೂರು ಜಿಲ್ಲೆ ಪ್ರವೇಶಿಸಿತು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಘಟಾನುಘಟಿ ನಾಯಕರ ಜೊತೆಗೆ ಅಧಿನಾಯಕಿ ಸೋನಿಯಾ ಗಾಂಧಿ ಅವರು ಸಹ ಮಂಡ್ಯ ಜಿಲ್ಲೆಯಲ್ಲಿ ಪಾದಯಾತ್ರೆ ಮಾಡಿದ್ದರು. ಆ ಪಾದ ಯಾತ್ರೆಯಲ್ಲಿ ಲಕ್ಷಾಂತರ ಜನ ಸೇರಿದ್ದರಿಂದ ಜಿಲ್ಲಾಡಳಿತ ಮತ್ತು ಜಿಲ್ಲಾ ಪೋಲಿಸ್ ಇಲಾಖೆ ಸಿಬ್ಬಂದಿ ಮಂಡ್ಯ ಜಿಲ್ಲೆಯಲ್ಲಿ ಹಗಲು-ರಾತ್ರಿ ಶ್ರಮಪಟ್ಟು ಕೆಲಸ ಮಾಡಿದ್ದರು.
ರಾಹುಲ್ ಗಾಂಧಿಯವರ ಪಾದಯಾತ್ರೆ ಜಿಲ್ಲೆಯಿಂದ ನಿರ್ಗಮಿಸಿದ ತಕ್ಷಣ ಬಿಜೆಪಿ ನಾಯಕರು ಸಕ್ರಿಯವಾಗಿರುವ, ಸರ್ಕಾರವೇ ಪ್ರಾಯೋಜಿಸುತ್ತಿರುವ ಮಹಾ ಕುಂಭಮೇಳ ಕೆ.ಆರ್.ಪೇಟೆಯಲ್ಲಿ ಪ್ರಾರಂಭವಾಗಿದ್ದು, ಇದರಲ್ಲಿ ಬಿಜೆಪಿಯ ಘಟಾನುಘಟಿ ನಾಯಕರ ಜೊತೆಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಅದಿತ್ಯನಾಥ್ ಅವರು ಸಹ ಭಾಗವಹಿಸುತ್ತಿದ್ದಾರೆ.
ಈ ಕುಂಭಮೇಳಕ್ಕೆ ಐದಾರು ಕಡೆಗಳಿಂದ ರಥಯಾತ್ರೆಗಳು ಸಹ ಬಂದು ಸೇರುತ್ತಿವೆ.ಕಳೆದ 20-25 ದಿನಗಳಿಂದ ಇಡೀ ಜಿಲ್ಲಾಡಳಿತ ಕುಂಭಮೇಳದ ಹಿಂದೆ ಬಿದ್ದು ಹಗಲು-ರಾತ್ರಿ ಕೆಲಸ ಮಾಡುತ್ತಿದೆ. ಒಟ್ಟಿನಲ್ಲಿ ಜಿಲ್ಲಾಡಳಿತ ಮತ್ತು ಜಿಲ್ಲಾ ಪೋಲಿಸ್ ಇಲಾಖೆ ಈ ಯಾತ್ರೆ, ಜಾತ್ರೆ, ಮೇಳಗಳಿಂದ ಸುಸ್ತಾಗಿರುವುದಂತೂ ಸತ್ಯವಾಗಿದೆ.