ಮಂಡ್ಯ ವಿಧಾನಸಭಾ ಕ್ಷೇತ್ರದ ಜನರಿಗೆ ಧರ್ಮಸ್ಥಳದ ಯಾತ್ರೆ ಮಾಡಿಸುವ ಮೂಲಕ ಮಂಜುನಾಥ ಸ್ವಾಮಿಯ ದರ್ಶನ ಮಾಡಿಸುವುದು ನನ್ನ ಉದ್ದೇಶವೇ ಹೊರತು, ರಾಜಕಾರಣದ ಉದ್ದೇಶವಿಲ್ಲ ಎಂದು ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಎಚ್.ಎಮ್. ಯೋಗೇಶ್ ತಿಳಿಸಿದರು.
ಮಂಡ್ಯ ನಗರದ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿರುವ ಗಿರಿಜಾ ಟಾಕೀಸ್ ಮುಂಭಾಗದಲ್ಲಿ ಧರ್ಮಸ್ಥಳ ಯಾತ್ರೆಗೆ ತೆರಳಿದ 50 ಬಸ್ ಗಳಿಗೆ ಶಾಸಕ ಎಂ.ಶ್ರೀನಿವಾಸ್ ಶುಭ ಹಾರೈಸಿ ಬೀಳ್ಕೊಟ್ಟರು.
ಇಂದು 50 ಬಸ್ ಗಳಲ್ಲಿ ಹಾಗೂ ಕಾರುಗಳಲ್ಲಿ ಸುಮಾರು 3500 ಮಂದಿ ಧರ್ಮಸ್ಥಳ ಯಾತ್ರೆಗೆ ತೆರಳುತ್ತಿದ್ದಾರೆ. ಮಂಡ್ಯ ವಿಧಾನಸಭಾ ಕ್ಷೇತ್ರದ ತಾಯಂದಿರಿಗೆ, ಅಕ್ಕ, ತಂಗಿಯರಿಗೆ, ಅಣ್ಣಂದಿರಿಗೆ ಧರ್ಮಸ್ಥಳ ಮಂಜುನಾಥ ಸ್ವಾಮಿಯ ದರ್ಶನ ಮಾಡಿಸುವ ಬಗ್ಗೆ ಒಂದು ವರ್ಷದ ಹಿಂದೆಯೇ ಯೋಜನೆ ರೂಪಿಸಿದ್ದೆವು. ಆದರೆ ಕೋವಿಡ್ ಹಿನ್ನೆಲೆಯಲ್ಲಿ ಜನರನ್ನು ಅಲ್ಲಿಗೆ ಕಳುಹಿಸಿ ನಿರ್ವಹಣೆ ಮಾಡುವುದು ಕಷ್ಟವಾದ್ದರಿಂದ ಈಗ ಧರ್ಮಸ್ಥಳ ಯಾತ್ರೆ ಮಾಡಿಸುತಿದ್ದೇವೆ.
ಇದರ ಹಿಂದೆ ಚುನಾವಣೆ, ರಾಜಕಾರಣದ ಉದ್ದೇಶವಿಲ್ಲ. ಚುನಾವಣೆ ಮಾಡುವುದಾದರೆ ಈ ಹಣವನ್ನು ಚುನಾವಣೆಯಲ್ಲಿಯೇ ಖರ್ಚು ಮಾಡಬಹುದಿತ್ತು. ಆದರೆ ನಾವು ಜನರ ಜೊತೆ ನಿಂತು ಕೆಲಸ ಮಾಡಿ ಗೆಲ್ಲಬೇಕು ಎಂಬ ಹಿನ್ನೆಲೆಯಲ್ಲಿ ಧರ್ಮಸ್ಥಳ ಯಾತ್ರೆ ಹಮ್ಮಿಕೊಂಡಿದ್ದೇವೆ ಎಂದು ಯೋಗೇಶ್ ತಿಳಿಸಿದರು.
ಇಂದು ಧರ್ಮಸ್ಥಳ ಯಾತ್ರೆಗೆ ತೆರಳಿರುವ ಜನರಿಗೆ ಹಾಸನದಲ್ಲಿ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ. ಧರ್ಮಸ್ಥಳ ಮಂಜುನಾಥ ಸ್ವಾಮಿಯ ದರ್ಶನ ಮಾಡಿಸಿ, ಸೌತಡ್ಕ ಗಣಪತಿ ಹಾಗೂ ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿಯ ದರ್ಶನ ಮಾಡಿಸಲಾಗುವುದು ಎಂದರು.
ಶಾಸಕ ಎಂ.ಶ್ರೀನಿವಾಸ್ ಮಾತನಾಡಿ, ಧರ್ಮಸ್ಥಳ ಯಾತ್ರೆಗೆ ತೆರಳಲಿರುವ ಎಲ್ಲರಿಗೂ ಮಂಜುನಾಥ ಸ್ವಾಮಿ ಒಳ್ಳೆಯದು ಮಾಡಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷ ತಿಮ್ಮೇಗೌಡ, ನಗರಸಭಾ ಸದಸ್ಯರಾದ ನಾಗೇಶ್, ರವೀಂದ್ರ, ಜೆಡಿಎಸ್ ಮುಖಂಡರಾದ ಪುಟ್ಟಸ್ವಾಮಿ, ಎಂ.ಎಸ್.ಸುರೇಶ್, ವೆಂಕಟೇಶ್, ಅನಿಲ್ ಸೇರಿದಂತೆ ಹಲವರಿದ್ದರು.