ಅನಧಿಕೃತ ಟ್ಯೂಷನ್ ಸೆಂಟರ್ ವ್ಯವಸ್ಥಾಪಕನೊಬ್ಬ ಬಾಲಕಿ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿದ ನಂತರ ಸಾರ್ವಜನಿಕ ಶಿಕ್ಷಣ ಇಲಾಖೆ ಎಚ್ಚೆತ್ತುಕೊಂಡಿದೆ.
ಮಂಡ್ಯ ಜಿಲ್ಲೆಯಲ್ಲಿ ಅನಧಿಕೃತವಾಗಿ ನಡೆಸುತ್ತಿರುವ ಟ್ಯೂಷನ್ ಕೇಂದ್ರಗಳನ್ನು ನಿಯಂತ್ರಿಸುವ ಕುರಿತು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಜವರೇಗೌಡ ಇಂದು ಎಲ್ಲಾ ತಾಲೂಕುಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸುತ್ತೋಲೆ ಹೊರಡಿಸಿದ್ದಾರೆ.
ಮಳವಳ್ಳಿ ಪಟ್ಟಣದ ಜ್ಞಾನ ಕುಟೀರ ಕೋಚಿಂಗ್ ಸೆಂಟರ್ನಲ್ಲಿ ಸಂಸ್ಥೆಯ ವ್ಯವಸ್ಥಾಪಕರು 10 ವರ್ಷದ ಶಾಲಾ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಹತ್ಯೆ ಮಾಡಿರುವ ಪ್ರಕರಣ ಅತ್ಯಂತ ಶೋಚನಿಯ. ಈ ಹಿನ್ನೆಲೆಯಲ್ಲಿ ಕೋಚಿಂಗ್ ಸೆಂಟರ್ ನೋಂದಣಿ ಕುರಿತಾದ ಮಾಹಿತಿಗಳನ್ನು ಸಂಗ್ರಹಿಸಿದ ಸಂದರ್ಭದಲ್ಲಿ ಜ್ಞಾನ ಕುಟೀರ ಕೋಚಿಂಗ್ ಸೆಂಟರ್ ಅನಧಿಕೃತವಾಗಿ ನಡೆಯುತ್ತಿರುವ ಸಂಸ್ಥೆ ಎಂಬುದು ದೃಢಪಟ್ಟಿರುತ್ತದೆ.
ಸಾರ್ವಜನಿಕ ಶಿಕ್ಷಣ ಇಲಾಖೆಯ ವ್ಯಾಪ್ತಿಯಲ್ಲಿ ಶಿಕ್ಷಣ ಕಾಯಿದೆ ನಿಯಮ 36 ರಂತೆ ಯಾವುದೇ ಶಿಕ್ಷಣ ಸಂಸ್ಥೆ ಅಥವಾ ಕೋಚಿಂಗ್ ಸೆಂಟರ್ ನೋಂದಣಿ ಇಲ್ಲದೇ ನಡೆಸಲು ಅವಕಾಶವಿರುವುದಿಲ್ಲ. ಪ್ರತಿ ಶೈಕ್ಷಣಿಕ ವರ್ಷ ಪೂರ್ವದಲ್ಲಿ ಆಯಾ ತಾಲ್ಲೂಕು ವ್ಯಾಪ್ತಿಯಲ್ಲಿ ಕಾರ್ಯಾಚರಣೆಯಲ್ಲಿರುವ ಎಲ್ಲಾ ಅಧಿಕೃತ ಮತ್ತು ಅನಧಿಕೃತ ಸಂಸ್ಥೆಗಳ ವಿವರ ಸಂಗ್ರಹಿಸುವಂತೆ ನಿರಂತರವಾಗಿ ಸೂಚಿಸುತ್ತಾ ಬರಲಾಗುತ್ತಿದೆ. ಆದಾಗ್ಯೂ ಕೂಡ ಅನಧಿಕೃತ ಸಂಸ್ಥೆ ನಡೆಯುತ್ತಿರುವುದು ಈ ಪ್ರಕರಣದಲ್ಲಿ ಕಂಡು ಬಂದಿದೆ.
ಎಲ್ಲಾ ಕೋಚಿಂಗ್ ಸೆಂಟರ್ ಗಳು, ನೋಂದಣಿ ಆಗಿರುವ ಕುರಿತು ಒಂದು ದಿನದಲ್ಲಿ ಮಾಹಿತಿ ಸಂಗ್ರಹಿಸಿ ಸಲ್ಲಿಸುವುದು. ನೋಂದಣಿ ಇಲ್ಲದೇ ಅನಧಿಕೃತ ಸಂಸ್ಥೆಗಳು ನಡೆಯುತ್ತಿರುವುದು ಕಂಡು ಬಂದಲ್ಲಿ ಶಿಕ್ಷಣ ಕಾಯಿದೆಯಡಿ ತಕ್ಷಣ ಪ್ರಕರಣ ದಾಖಲಿಸಿ, ಮುಚ್ಚಿಸಿ ವರದಿ ಮಾಡಬೇಕು. ಅಲ್ಲದೇ ನೋಂದಣಿ ಆಗಿರುವ ಸಂಸ್ಥೆಗಳು ಶಿಕ್ಷಣ ಕಾಯಿದೆಯಡಿ ಸೂಚಿಸಿರುವ ಎಲ್ಲಾ ಮಾನದಂಡಗಳನ್ನು ಪೂರೈಸಿರುವ ಬಗ್ಗೆ ಪರಿಶೀಲಿಸಿ ಖಚಿತಪಡಿಸಿಕೊಂಡು ವರದಿ ಮಾಡಬೇಕು ಹಾಗೂ ಪೋಷಕರು, ಅನಧಿಕೃತ ಕೋಟಿಂಗ್ ಸೆಂಟರ್ ಗಳಿಗೆ ಮಕ್ಕಳನ್ನು ಕಳುಹಿಸಿದಂತೆ, ವ್ಯಾಪಕ ಪ್ರಚಾರದ ಮೂಲಕ ತಿಳುವಳಿಕೆ ಮೂಡಿಸುವಂತೆ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ಸೂಚಿಸಿದ್ಧಾರೆ.