ಮುಗ್ಧ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಕೊಲೆ ಮಾಡಿರುವ ಆರೋಪಿಯನ್ನ ಬೀದಿಯಲ್ಲಿ ಕತ್ತರಿಸಿ ತುಂಡು ತುಂಡು ಮಾಡಬೇಕು ಎಂದು ಶಾಸಕ ಜಮೀರ್ ಅಹಮದ್ ಖಾನ್ ಕಿಡಿಕಾರಿದರು.
ಮಳವಳ್ಳಿ ಪಟ್ಟಣದಲ್ಲಿ ಬಾಲಕಿ ನಿವಾಸಕ್ಕೆ ಭೇಟಿ ನೀಡಿ ಪೋಷಕರಿಗೆ ಸಾಂತ್ವನ ಹೇಳಿ 5 ಲಕ್ಷ ರೂ.ನೀಡಿ ಧೈರ್ಯ ತುಂಬಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂತಹ ಘಟನೆ ನಡೆಯಬಾರದಿತ್ತು.
ಈ ವಿಚಾರ ಕೇಳಿದ್ರೆನೆ ಮೈ ಜುಮ್ ಎನಿಸುತ್ತದೆ. ಇದು ಮನುಷ್ಯರು ಮಾಡುವ ಕೆಲಸವಲ್ಲ, ಯಾರೋ ರಾಕ್ಷಸನೇ ಮಾಡಿರುವ ಕೆಲಸ ಅನಿಸುತ್ತಿದೆ. 10 ವರ್ಷದ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ಮಾಡಲು ಮನುಷ್ಯನಿಂದ ಸಾಧ್ಯವಿಲ್ಲ. ಇಂತಹ ರಾಕ್ಷಸನನ್ನ ಸಾರ್ವಜನಿಕವಾಗಿ ಗಲ್ಲು ಶಿಕ್ಷೆ ಕೊಟ್ಟರೆ ಆಗ ಎಲ್ಲರಿಗೂ ಭಯ ಬರಲಿದೆ ಎಂದರು.
ತುಂಡು ತುಂಡಾಗಿ ಕತ್ತರಿಸಬೇಕು ಇಂತಹ ರಾಕ್ಷಸನನ್ನು ಬೀದಿಯಲ್ಲಿ ನಿಲ್ಲಿಸಿ ತುಂಡು ತುಂಡಾಗಿ ಕತ್ತರಿಸಿ ಹಾಕಬೇಕು. ಈ ರೀತಿ ಕಾನೂನು ನಾವು ತರದಿದ್ದರೆ ಇನ್ಮುಂದೆಯೂ ಇಂತಹ ಘಟನೆಗಳು ನಡೆಯುತ್ತಲೆ ಇರ್ತವೆ.
ಸರ್ಕಾರಕ್ಕೆ ಮನವಿ ಮಾಡುತ್ತೇನೆ. ಇಂತಹ ವಿಚಾರಕ್ಕೆ ಪ್ರತ್ಯೇಕ ಕಾನೂನು ಜಾರಿಯಾಗಬೇಕು. ಸರ್ಕಾರ ಹಾಗೂ ನ್ಯಾಯಾಲಯಕ್ಕೆ ಮನವಿ ಮಾಡ್ತೇನೆ, ಆರೋಪಿಗೆ ಬೀದಿಯಲ್ಲಿ ಗಲ್ಲು ಶಿಕ್ಷೆ ನೀಡಬೇಕು. ಮಗು ಅಂತು ವಾಪಸ್ ಕೊಡಲು ನಮ್ಮಿಂದ ಸಾಧ್ಯವಿಲ್ಲ. ನನ್ನ ಕಡೆಯಿಂದ ಸಣ್ಣ ನೆರವನ್ನ ಕೊಟ್ಟಿದ್ದೇನೆ. ಆ ಕುಟುಂಬಕ್ಕೆ ನೋವನ್ನ ಸಹಿಸಿಕೊಳ್ಳುವ ಶಕ್ತಿ ದೇವರು ನೀಡಲಿ ಎಂದರು.
ಮಾಜಿ ಸಚಿವ ಪಿ.ಎಂ.ನರೇಂದ್ರ ಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದೇವರಾಜ್ ಸೇರಿದಂತೆ ಹಲವರು ಈ ಸಂದರ್ಭದಲ್ಲಿದ್ದರು.
ಹರ್ಷಿಕಾ ಪೂಣಚ್ಚ-ಭುವನ್ ಭೇಟಿ
ಸಂತ್ರಸ್ತ ಬಾಲಕಿ ಕುಟುಂಬದ ಸದಸ್ಯರ ಭೇಟಿ ಮಾಡಿದ ಕನ್ನಡ ಚಲನಚಿತ್ರ ನಟಿ ಹರ್ಷಿಕಾ ಪೂಣಚ್ಚ, ನಟ ಭುವನ್ ಸಾಂತ್ವನ ಹೇಳಿದರು.
ನಟಿ ಹರ್ಷಿಕಾ ಪೂಣಚ್ಚ ಮಾತನಾಡಿ, ಹತ್ತು ವರ್ಷದ ಮಗುವಿನ ಮೇಲೆ ದೌರ್ಜನ್ಯ ಎಸಗಿರುವ ವ್ಯಕ್ತಿಯ ಮನಸ್ಸಿನಲ್ಲಿ ಈ ರೀತಿಯ ವಿಕೃತ ಯೋಚನೆ ಬರುತ್ತದೆ, ಎಂದರೆ ನಾವು ಯಾವ ಸಮಾಜದಲ್ಲಿದ್ದೇವೆ ಎಂಬ ಪ್ರಶ್ನೆ ಕಾಡುತ್ತದೆ. ಇಂದು ಶಾಲೆಗೆ ಮಕ್ಕಳನ್ನು ಕಳುಹಿಸಲು ಎರಡೆರಡು ಬಾರಿ ಯೋಚನೆ ಮಾಡುವಂತ ಸ್ಥಿತಿ ನಿರ್ಮಾಣವಾಗಿದೆ. ಈ ಕೃತ್ಯ ಎಸಗಿರುವ ಆರೋಪಿಗೆ ತ್ವರಿತ ಗತಿಯಲ್ಲಿ ವಿಚಾರಣೆ ನಡೆದು ಕಠಿಣ ಶಿಕ್ಷೆ ಆಗಬೇಕು ಎಂದರು.
ನಟ ಭುವನ್ ಮಾತನಾಡಿ, ಒಂದು ಗಟ್ಟಿಯಾದ ಕಾನೂನು ಬರಬೇಕು. ದುಬೈನಂತಹ ದೇಶದಲ್ಲಿ ಒಂದು ಸಣ್ಣ ತಪ್ಪು ನಡೆದರೂ ಆತನನ್ನು ರಸ್ತೆಯ ಮಧ್ಯೆ ನೆಲಕ್ಕೆ ಹೂತು ಹಾಕಿ ಆತನ ತಲೆಯ ಮೇಲೆ ಕಲ್ಲು ಹೊಡೆದು ಸಾಯಿಸುವ ಶಿಕ್ಷೆ ನೀಡಲಾಗುತ್ತದೆ. ಭಾರತದಲ್ಲಿ ಕೂಡ ಇನ್ನು ಮುಂದೆ ಯಾರೂ ಅತ್ಯಾಚಾರ ಮಾಡದಂತಹ ಹಾಗೆ ಕಠಿಣ ಕಾನೂನು ಜಾರಿಗೆ ತರಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಕುರುಬರ ಸಂಘದ ಜಿಲ್ಲಾಧ್ಯಕ್ಷ ಸುರೇಶ್ ಉಪಸ್ಥಿತರಿದ್ದರು.