ಚೀನಾದ ಸೈನಿಕರ ಆಕ್ರಮಣಕ್ಕೆ ಮಣಿಯದೆ, ತಮ್ಮ ಜೀವವನ್ನೂ ಲೆಕ್ಕಿಸದೆ 9 ಮಂದಿ ಚೀನಿ ಸೈನಿಕರನ್ನು ಸೆರೆ ಹಿಡಿಯುವ ಮೂಲಕ ಶೌರ್ಯ ಪ್ರದರ್ಶಿಸಿ ಹತ್ತು ಮಂದಿ ಭಾರತೀಯ ಸೈನಿಕರು ಹುತಾತ್ಮರಾಗಿದ್ದು, ಅವರ ಶೌರ್ಯ ಸ್ಮರಣೀಯ ಎಂದು ಜಿಲ್ಲಾ ಪೋಲಿಸ್ ವರಿಷ್ಟಾಧಿಕಾರಿ ಎನ್.ಯತೀಶ್ ತಿಳಿಸಿದರು.
ಮಂಡ್ಯ ನಗರದ ಪೊಲೀಸ್ ಪೆರೇಡ್ ಮೈದಾನದಲ್ಲಿ ಆಯೋಜಿಸಿದ್ದ ಪೊಲೀಸ್ ಹುತಾತ್ಮರ ದಿನಾಚರಣೆಯಲ್ಲಿ ಭಾಗವಹಿಸಿದ್ದ ಅತಿಥಿಗಳನ್ನು ಸ್ವಾಗತಿಸಿ ಅವರು ಮಾತನಾಡಿದರು.
ಲಡಾಕ್ ಗಡಿಯಲ್ಲಿ ಹುತಾತ್ಮರಾದ ಮೇಜರ್ ಕರಣ್ ಸಿಂಗ್ ನೇತೃತ್ವದ ಹುತಾತ್ಮ ಸೇನಾ ಪಡೆಯನ್ನು ಸ್ಮರಿಸುವ ಸಲುವಾಗಿ ಪ್ರತಿ ವರ್ಷ ಅಕ್ಟೋಬರ್ 21 ರಂದು ಪೊಲೀಸ್ ಹುತಾತ್ಮ ದಿನಾಚರಣೆಯನ್ನು ಆಚರಿಸಲಾಗುತ್ತಿದೆ ಎಂದರು.
ಜಮ್ಮು ಕಾಶ್ಮೀರದ ಲಡಾಕ್ ಗಡಿಯಲ್ಲಿ ಪಹರೆಯಲ್ಲಿದ್ದ ಪೊಲೀಸ್ ಪಡೆಯ ಮೇಲೆ ಅಧಿಕ ಸಂಖ್ಯೆಯಲ್ಲಿದ್ದ ಚೀನಿ ಸೈನಿಕರು ಅಪಾರ ಶಸ್ತ್ರಾಸ್ತ್ರಗಳೊಂದಿಗೆ ದಾಳಿ ನಡೆಸಿದರು.ಚೀನಿಯರ ಆಕ್ರಮಣಕ್ಕೆ ಎದೆಗುಂದದ ಭಾರತದ ಸೈನಿಕರು ಪ್ರತಿರೋಧ ತೋರಿ ಚೀನಿ ಸೈನಿಕರನ್ನು ಸದೆಬಡಿದರು.
ಅಂದು ಹುತಾತ್ಮರಾದ ಹತ್ತು ಮಂದಿ ಸೈನಿಕರ ಸ್ಮರಣೆಗಾಗಿ 1960 ರಿಂದ ಪೊಲೀಸ್ ಹುತಾತ್ಮ ದಿನಾಚರಣೆಯನ್ನು ದೇಶದಲ್ಲಿ ಆಚರಿಸಿಕೊಂಡು ಬರಲಾಗುತ್ತಿದೆ ಎಂದು ತಿಳಿಸಿದರು.
ಕಳೆದೊಂದು ವರ್ಷದ ಅವಧಿಯಲ್ಲಿ ದೇಶದಲ್ಲಿ 264 ಮಂದಿ ಹಾಗೂ ರಾಜ್ಯದಲ್ಲಿ 11 ಮಂದಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಕರ್ತವ್ಯ ನಿರತರಾಗಿದ್ದಾಗ ಸಾವನ್ನಪ್ಪಿದ್ದಾರೆ ಎಂದು ಮಾಹಿತಿ ನೀಡಿದರು.