ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಆಂಗಳ ಗ್ರಾಮದಲ್ಲಿ ವಸತಿ ಸಚಿವ ವಿ.ಸೋಮಣ್ಣ ದಲಿತ ಮಹಿಳೆಯ ಮೇಲೆ ಕ್ಷುಲ್ಲಕ ಕಾರಣಕ್ಕೆ ಕಪಾಳ ಮೋಕ್ಷ ಮಾಡಿರುವುದನ್ನು ಖಂಡಿಸಿ ಮದ್ದೂರಿನಲ್ಲಿ ದಲಿತ ಹಕ್ಕುಗಳ ಸಮಿತಿ ಮಂಗಳವಾರ ಪ್ರತಿಭಟನೆ ನಡೆಯಿತು.
ಮದ್ದೂರು ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು, ಹಣ, ಅಧಿಕಾರದ ಅಹಂನಿಂದ ಸಚಿವ ಸೋಮಣ್ಣ ಬಡವರ ಮೇಲೆ ದರ್ಪ ತೋರುತ್ತಿದ್ದಾರೆ, ಒಬ್ಬ ಮಹಿಳೆಯ ಕೆನ್ನೆಗೆ ಬಾರಿಸಿರುವ ಮೂಲಕ ಮಹಿಳೆಯರನ್ನು 2ನೇ ದರ್ಜೆ ನಾಗರೀಕರನ್ನಾಗಿ ನೋಡುತ್ತಿದ್ದಾರೆಂದು ದೂರಿದರು.
ಅಂಗಳ ಗ್ರಾಮದಲ್ಲಿ 170 ಜನಕ್ಕೆ ಹಕ್ಕು ಪತ್ರ ನೀಡುವ ವೇಳೆ, ವೇದಿಕೆ ಮೇಲೆ ಕೆಂಪಮ್ಮ ಎಂಬ ಮಹಿಳೆ ನನಗೂ ಮನೆ ಇಲ್ಲ, ನನಗೂ ಒಂದು ಹಕ್ಕು ಪತ್ರ ಕೊಡಿ ಎಂದು ಕೇಳಲು ಹೋದಾಗ ಕಪಾಲ ಮೋಕ್ಷ ಮಾಡಿರುವುದು ಖಂಡನೀಯ. ಬಡ ಕುಟುಂಬದಿಂದ ಬಂದ ಕೆಂಪಮ್ಮ ನಿವೇಶನ ಹಕ್ಕು ಪತ್ರ ಕೇಳಲು ಸಚಿವರ ಬಳಿ ಕೇಳಿದಾಗ ಮಹಿಳೆ ಎಂಬ ಸೌಜನ್ಯ ಮರೆತು ದೌರ್ಜನ್ಯ ಪ್ರದರ್ಶನ ಮಾಡಿರುವುದು ಖಂಡನೀಯ. ಈ ದೃಶ್ಯ ಎಲ್ಲಾ ಮಾಧ್ಯಮದಲ್ಲಿ ಪ್ರಸಾರವಾಗಿದೆ, ಎಂದು ದಲಿತ ಹಕ್ಕುಗಳ ಸಮಿತಿಯ ಅಧ್ಯಕ್ಷ ಆರ್.ಕೃಷ್ಣ ಖಂಡಿಸಿದರು. ಇದೇ ಸಂದರ್ಭದಲ್ಲಿ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಲಾಯಿತು.
ಸಮಿತಿಯ ಜಿಲ್ಲಾ ಕಾರ್ಯದರ್ಶಿ ಅಂಬುಜಿ, ಮುಖಂಡರಾದ ವಿಜೇಂದ್ರ ಕುಮಾರ್, ಶಿವಲಿಂಗಯ್ಯ, ಭಾನುಪ್ರಕಾಶ್, ಶ್ರೀಕಂಠ ಹಾಗೂ ನಾಗಮ್ಮ ಉಪಸ್ಥಿತರಿದ್ದರು.