ಮಂಡ್ಯ ನಗರದ ಬಂದಿಗೌಡ ಬಡಾವಣೆಯ ಸ.ನಂ.174/8ರ 3 ಗುಂಟೆ ಜಮೀನು ನೋಂದಣಿಯು ಕ್ರಯ ಪತ್ರದಂತೆ ಕಳೆದ ಫೆಬ್ರವರಿಯಲ್ಲಿ ಉಪನೊಂದಣಾಧಿಕಾರಿ ಕಚೇರಿಯಲ್ಲಿ ನೊಂದಣಿಯಾಗಿರುತ್ತದೆ. ಆದರೆ ನಕಲಿ ದಾಖಲೆ ಸೃಷ್ಠಿಸಿ ಅಕ್ರಮದಲ್ಲಿ ಭಾಗಿಯಾಗಿದ್ದಾರೆಂದು ತಹಶೀಲ್ದಾರ್ ಕುಂಞ ಮಹಮದ್ ಅವರ ಮೇಲೆ ದೂರು ನೀಡಿರುವುದರಲ್ಲಿ ಯಾವುದೇ ಹುರುಳಿಲ್ಲ ಎಂದು ಹೈಕೊರ್ಟ್ ವಕೀಲ ಹೆಚ್.ಸಿ.ಶಿವರಾಮು ತಿಳಿಸಿದರು.
ಮಂಡ್ಯ ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪನೊಂದಣಾಧಿಕಾರಿ ಕಚೇರಿಯ ಕಾವೇರಿ ತಂತ್ರಾಂಶದಿಂದ ಕಂದಾಯ ಭೂಮಿ ತಂತ್ರಾಂಶಕ್ಕೆ ಕ್ರಯಪತ್ರದ ಜೆ ನಮೂನೆಗೆ ವರ್ಗಾವಣೆಯಾಗಿರುತ್ತದೆ. ಇದು ರೆವಿನ್ಯೂ ನ್ಯಾಯಾಲಯದ ವಿಚಾರಣೆಯಲ್ಲಿನ ಪ್ರಕರಣವಾಗಿರುವುದರಿಂದ ಸಂಬಂಧಿಸಿದ ವಾದಿ ಮತ್ತು ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಿ, ತಹಶೀಲ್ದಾರ್ ನ್ಯಾಯಾಲಯದಲ್ಲಿ ವಿಚಾರನೆ ನಡೆಸಿ, ನೋಂದಣಿ ಕ್ರಯಪತ್ರವನ್ನು ತಿರಸ್ಕರಿಸುವ ಅಥವಾ ರದ್ದುಪಡಿಸುವ ಯಾವುದೇ ಅಧಿಕಾರವೂ ಕಂದಾಯ ಇಲಾಖೆ ನ್ಯಾಯಾಲಯದ ವ್ಯಾಪ್ತಿಗೆ ಒಳಪಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಉಚ್ಚ ನ್ಯಾಯಾಲಯದ ಆದೇಶದಂತೆ ಹಾಗೂ ಸರ್ಕಾರದ ಸುತ್ತೋಲೆಗಳಂತೆ ನೋಂದಣಿ ಪತ್ರವನ್ನು ಖಾತೆಯನ್ನಾಗಿ ಅಂಗೀಕರಿಸಲಾಗಿದೆ. ಈ ಪ್ರಕರಣವು ಮೇಲ್ಮನವಿ ಪ್ರಕರಣವಾಗಿದೆ. ಆದರೆ ಸರ್ಕಾರಿ ಜಮೀನನ್ನು ಖಾಸಗಿಯವರಿಗೆ ಪರಭಾರೆ ಮಾಡುವ ಹುನ್ನಾರ ನಡೆದಿದೆ ಎಂಬ ಆರೋಪ ಕೇಳಿ ಬಂದಿರುವುದು ದುರುದ್ದೇಶದಿಂದ ಕೂಡಿದೆ ಶಿವರಾಮು ತಿಳಿಸಿದರು.