ಅನುದಾನಿತ ಶಾಲಾ ಕಾಲೇಜುಗಳ ನೌಕರರಿಗೆ ಸರ್ಕಾರ ಪಿಂಚಣಿ ನೀಡದೇ ಮಲತಾಯಿ ಧೋರಣೆ ಅನುಸರಿಸುತ್ತಿರುವುದು ಖಂಡನೀಯ ಎಂದು ಜೆಡಿಎಸ್ ಮಂಡ್ಯ ಜಿಲ್ಲಾ ವಕ್ತಾರ ಮಹಾಲಿಂಗೇಗೌಡ ಮುದ್ದನಘಟ್ಟ ಹೇಳಿದರು.
ಮಂಡ್ಯ ಜಿಲ್ಲಾ ನೌಕರರ ಸಂಘದ ಸದಸ್ಯರು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಲು ಮಂಡ್ಯದಿಂದ ತೆರಳುವ ಸಂದರ್ಭದಲ್ಲಿ ಅವರನ್ನು ಬೀಳ್ಗೊಟ್ಟು ಮಾತನಾಡಿದ ಅವರು, ಈ ನೌಕರರ ಸೇವೆಯನ್ನು ಮನಗೊಂಡು ಪಿಂಚಣಿ ಸೌಲಭ್ಯವನ್ನು ಸರ್ಕಾರ ಕಲ್ಪಿಸಬೇಕು, ರಾಜ್ಯದ ಪ್ರತಿಯೊಬ್ಬ ನೌಕರರಿಗೂ ಹಳೆಯ ನಿಶ್ಚಿತ ಪಿಂಚಣಿಯನ್ನೆ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.
ಪಿಂಚಣಿ ಪಡೆಯುವುದು ಇವರ ಮೂಲಭೂತ ಹಕ್ಕಾಗಿದೆ, ಸರ್ಕಾರ ಇಂತಹ ತಾರತಮ್ಯ ನೀತಿಯನ್ನು ಅನುಸರಿದೇ ಇವರ ಅಗತ್ಯತೆಯನ್ನು ಈಡೇರಿಸಬೇಕು. ಹಾಗಾಗಿ ಕೂಡಲೇ ಎಲ್ಲಾ ಅನುದಾನಿತ ಶಾಲಾ ಕಾಲೇಜುಗಳ ನೌಕರರಿಗೆ ಪಿಂಚಣಿ ದೊರಕುವಂತೆ ಆಗಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಜಿಲ್ಲೆಯಾದ್ಯಂತ ಹೋರಾಟ ನಡೆಸಲಾಗುವುದು ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಕರ್ನಾಟಕ ರಾಜ್ಯ ಅನುದಾನಿತ ಶಾಲಾ ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘ ಹಾಗೂ ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದವರು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ನಡೆಯುತ್ತಿರುವ ಬೃಹತ್ ಹೋರಾಟ ಕೈಜೋಡಿಸುವುದಕ್ಕಾಗಿ ಪ್ರಯಾಣ ಬೆಳೆಸಿದ ನೌಕರರಿಗೆ ಶುಭಕೋರಿ ಕಳುಹಿಸಿಕೊಟ್ಟರು.
ಪ್ರತಿಭಟನೆ ಮಂಡ್ಯ ಜಿಲ್ಲೆಯಿಂದ 300ಕ್ಕೂ ಹೆಚ್ಚು ನೌಕರರು ತೆರಳಿದರು. ಈ ಸಂದರ್ಭದಲ್ಲಿ ಮಂಗಲ ಶಿವಣ್ಣ, ಗೋಪಿನಾಥ್, ರಾಮಕೃಷ್ಣ, ಶಿವಲಿಂಗಯ್ಯ, ಜಗದೀಶ್ ಭಾಗವಹಿಸಿದ್ದರು.