ಕೇಂದ್ರ ಸರ್ಕಾರ ಮಹಿಳಾ ಸಬಲೀಕರಣಕ್ಕಾಗಿ ಮಾತೃವಂದನಾ ಯೋಜನೆ, ಸ್ತ್ರೀ ಶಕ್ತಿ ಸಂಘಗಳಿಗೆ ಸಾಲ ಯೋಜನೆ ಸೇರಿದಂತೆ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು, ಇವುಗಳನ್ನು ಮಹಿಳೆಯರು ಸದುಪಯೋಗ ಪಡಿಸಿಕೊಳ್ಳಬೇಕೆಂದು ಇಂಧನ ಮತ್ತು ಬೃಹತ್ ಕೈಗಾರಿಕೆಗಳ ರಾಜ್ಯ ಸಚಿವ ಕ್ರಿಶನ್ ಪಾಲ್ ಗುರ್ಜರ್ ತಿಳಿಸಿದರು.
ಮದ್ದೂರಿನ ತಾಲ್ಲೂಕಿನ ಸರ್ಕಾರಿ ಕ್ರೀಡಾಂಗಣದಲ್ಲಿ ಇಂದು ಕೇಂದ್ರ ಸರ್ಕಾರದ ಯೋಜನೆಗಳ ಮಹಿಳಾ ಫಲಾನುಭವಿಗಳೊಂದಿಗೆ ಸಂವಾದ ನಡೆಸಿ ಮಾತನಾಡಿದರು. ಮೊದಲು ವ್ಯಕ್ತಿಗಳ ಹೆಸರಿನಲ್ಲಿ ಯೋಜನೆಗಳು ಪ್ರಾರಂಭವಾಗುತ್ತಿದ್ದವು, ಇಂದು ಪ್ರಧಾನ ಮಂತ್ರಿಯ ಹೆಸರಿನಲ್ಲಿ ಯೋಜನೆ ಪ್ರಾರಂಭವಾಗುತ್ತಿದೆ ಎಂದರು.
ಪ್ರಧಾನ ಮಂತ್ರಿ ವಂದನಾ ಯೋಜನೆಯಡಿ ಮೊದಲ ಬಾರಿ ಗರ್ಭಧರಿಸುವ ಮಹಿಳೆಯರಿಗೆ ಪೌಷ್ಠಿಕ ಆಹಾರ ಒದಗಿಸಲು ಮೂರು ಕಂತುಗಳಲ್ಲಿ 5,000 ರೂ. ಸಹಾಯಧನ ನೀಡಲಾಗುತ್ತಿತ್ತು, ಈ ಯೋಜನೆಯನ್ನು ಪ್ರಧಾನ ಮಂತ್ರಿಗಳು ಎರಡನೇ ಬಾರಿ ಗರ್ಭಧರಿಸುವ ಮಹಿಳೆಗೂ ವಿಸ್ತರಿಸಲು ಅಧಿಸೂಚನೆ ಹೊರಡಿಸಲಿದ್ದಾರೆ ಎಂದರು.
ಫಲಾನುಭವಿಗಳೊಂದಿಗೆ ಸಂವಾದ
ಒಂದು ದೇಶ ಒಂದು ಪಡಿತರ ಯೋಜನೆಯ ಫಲಾನುಭವಿಯಾದ ಬೆಸಗರಹಳ್ಳಿ ಸಯ್ಯದ್ ಲುಕ್ಮನ್ ಅವರು ತಾವು ಕೇರಳದಿಂದ ಕೆಲಸಕ್ಕಾಗಿ ಮದ್ದೂರಿಗೆ ಬಂದಿದ್ದು, ಕೇರಳದಲ್ಲಿ ಪಡೆದ ಪಡಿತರ ಚೀಟಿಯ ಸಹಾಯದಿಂದ ಮಂಡ್ಯ ಜಿಲ್ಲೆಯಲ್ಲಿ ಪಡಿತರ ಆಹಾರ ಪಡೆಯುತ್ತಿದ್ದೇನೆ. ಈ ಯೋಜನೆಯಿಂದ ಬೇರೆ ಬೇರೆ ಸ್ಥಳಗಳಿಗೆ ಕೆಲಸಕ್ಕೆ ತೆರಳುವ ಕಾರ್ಮಿಕರಿಗೆ ಹೆಚ್ಚು ಅನುಕೂಲವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಚೆಕ್ ವಿತರಣೆ
ಸ್ಟಾಂಡ್ ಆಫ್ ಇಂಡಿಯಾ ಯೋಜನೆಯಿಂದ ಸಾಲಕ್ಕಾಗಿ ಚಂದ್ರಕಲಾ ಎಂಬುವವರಿಗೆ 45 ಲಕ್ಷ, ಶೋಭ ಮತ್ತು ಸ್ವರ್ಣಗೌರಿ ರವರಿಗೆ ತಲಾ 10 ಲಕ್ಷ ಚೆಕ್ ಹಾಗೂ ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಯೋಜನೆಯಡಿ ಕುಮಾರ್ ಮತ್ತು ಸಂದೀಪ್ ರವರಿಗೆ ತಲಾ 2 ಲಕ್ಷದ ಚೆಕ್ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಪಿ ಯೋಗೇಶ್ವರ್, ಮಾಜಿ ಸಚಿವ ಸೋಮಶೇಖರ್, ಜಿಲ್ಲಾಧಿಕಾರಿ ಡಾ.ಹೆಚ್.ಎನ್.ಗೋಪಾಲ ಕೃಷ್ಣ, ಜಿ.ಪಂ.ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಾಂತಾ ಎಲ್.ಹುಲ್ಮನಿ, ಉಪ ವಿಭಾಗಾಧಿಕಾರಿ ಆರ್.ಐಶ್ವರ್ಯ, ತಹಶೀಲ್ದಾರ್ ನರಸಿಂಹಮೂರ್ತಿ, ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಉಪ ನಿರ್ದೇಶಕರ ಕೃಷ್ಣ ಕುಮಾರ್ ಉಪಸ್ಥಿತರಿದ್ದರು.