ಮಂಡ್ಯ ನಗರವು ರಾಜಧಾನಿ ಬೆಂಗಳೂರು ಹಾಗೂ ಸಾಂಸ್ಕೃತಿಕ ರಾಜಧಾನಿ ಮೈಸೂರಿನ ನಡುವೆ ಇದ್ದರೂ ಮೂಲ ಸೌಕರ್ಯಗಳ ವಿಚಾರದಲ್ಲಿ ಬಹಳ ಹಿಂದೆ ಬಿದ್ದಿದ್ದು, ಮಂಡ್ಯನಗರ ಹದಗೆಟ್ಟಿರುವ ರಸ್ತೆಗಳು ಸೇರಿದಂತೆ ನಗರ ವಿವಿಧ ಬಡಾವಣೆಗಳು ಮೂಲ ಸೌಲಭ್ಯದ ಕೊರತೆಯಿಂದ ಬಳಲುತ್ತಿದ್ದು, ಕೂಡಲೇ ಇವುಗಳ ಅಭಿವೃದ್ಧಿ ಕಾರ್ಯವನ್ನು ಕೈಗೆತ್ತಿಕೊಳ್ಳಬೇಕೆಂದು ಆಗ್ರಹಿಸಿ ರೈತಸಂಘದಿಂದ ಇಂದು ಬೈಕ್ ರ್ಯಾಲಿ ನಡೆಯಿತು.
ಮಂಡ್ಯನಗರದ ಗುತ್ತಲು ಸಮೀಪದ ಅರ್ಕೇಶ್ವರ ದೇವಾಲಯದಿಂದ ರೈತಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಮಧುಚಂದನ್ ಅವರ ನೇತೃತ್ವದಲ್ಲಿ ಬೈಕ್ ರ್ಯಾಲಿ ಹೋರಾಟ ನೂರಾರು ಕಾರ್ಯಕರ್ತರು ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಸಾರ್ವಜನಿಕರ ಗಮನ ಸೆಳೆದರು. ನಂತರ ನಗರಸಭೆ ಬಳಿ ಜಮಾಯಿಸಿದರು.
ಈ ಸಂದರ್ಭದಲ್ಲಿ ಮಧುಚಂದನ್ ಮಾತನಾಡಿ, ಮಂಡ್ಯ ನಗರದ ಯಾವುದೇ ರಸ್ತೆಯಲ್ಲಿ ನೀವು ಓಡಾಡಿದರು, ಆ ರಸ್ತೆಗಳು ಸಂಪೂರ್ಣ ಗುಂಡಿಯಿಂದ ಹಾಳಾಗಿದೆ. ಮಂಡ್ಯ ನಗರವನ್ನು ಸ್ವಚ್ಚಂದವಾಗಿಡಬೇಕಾದ ನಗರಸಭೆಯು ಈ ಬಗ್ಗೆ ಸ್ವಲ್ಪ ತಲೆ ಕೆಡಿಸಿಕೊಳ್ಳದ ಕಾರಣ ಇಂದು ಕರ್ನಾಟಕ ರಾಜ್ಯ ರೈತ ಸಂಘದ ಯುವ ಪಡೆಯ ವತಿಯಿಂದ ಬೃಹತ್ ಬೈಕ್ ನಡೆಸುತ್ತಿದ್ದೇವೆ ಎಂದರು.
ಪ್ರತಿನಿತ್ಯವೂ ಎಲ್ಲಾ ತಾಲೂಕುಗಳಿಂದ ಜಿಲ್ಲಾ ಕೇಂದ್ರಕ್ಕೆ ಬರುವ ಸಾರ್ವಜನಿಕರಿಗೆ ಈ ರಸ್ತೆಗಳಿಂದ ಆಗುತ್ತಿರುವ ಸಮಸ್ಯೆಗಳು ಹೇಳತೀರದು, ಇನ್ನಾದರೂ ಜಿಲ್ಲಾಡಳಿತ ಹಾಗೂ ನಗರಸಭೆ ಆಡಳಿತ ಈ ಬಗ್ಗೆ ಗಮನಹರಿಸಿ ಕ್ರಮ ಕೈಗೊಳ್ಳಬೇಕು, ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರ ರೀತಿಯಲ್ಲಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು. ನಂತರ ನಗರಸಭಾಧ್ಯಕ್ಷ ಹೆಚ್.ಎಸ್.ಮಂಜು ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.