ಶ್ರೀರಂಗಪಟ್ಟಣ ತಾಲ್ಲೂಕಿನ ಕೆಆರ್ಎಸ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿರುವ ಪೋಸ್ಕೊ ಪ್ರಕರಣದಲ್ಲಿ ಆರೋಪಿಗೆ ಪೊಲೀಸರು ನೋಟಿಸ್ ಕೊಟ್ಟು ಕಳುಹಿಸಿರುವ ನಡೆ ಅನುಮಾನಕ್ಕೆ ಆಸ್ಪದ ಮಾಡಿದೆ.
ಕೆ ಆರ್ ಎಸ್ ಠಾಣೆ ವ್ಯಾಪ್ತಿಯ ಹೊಂಗಹಳ್ಳಿಯಲ್ಲಿ 55 ವರ್ಷದ ಕುರಿಗಾಹಿಯೊಬ್ಬ 11 ವರ್ಷದ ಬಾಲಕಿಗೆ ತನ್ನ ಖಾಸಗಿ ಅಂಗ ತೋರಿಸಿದ ಪ್ರಕರಣದಲ್ಲಿ ಪೋಸ್ಕೊ ಕಾಯ್ದೆ ಅಡಿ ಪ್ರಕರಣ ದಾಖಲಾಗಿತ್ತು. ಆದರೆ ಕೆ ಆರ್ ಎಸ್ ಠಾಣೆ ಪೊಲೀಸರು ಈ ಪ್ರಕರಣದಲ್ಲಿ ಆರೋಪಿಯನ್ನು ಬಂಧಿಸಿ ನ್ಯಾಯಾಧೀಶರ ಎದುರು ಹಾಜರು ಪಡಿಸದೆ ಕೇವಲ ನೋಟಿಸ್ ಕೊಟ್ಟು ಕಳುಹಿಸಿದ್ದಾರೆಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಾರ್ವಜನಿಕರ ಆಕ್ರೋಶಕ್ಕೆ ಸ್ಪಂದಿಸಿದ ಶಾಸಕ ರವೀಂದ್ರ ಶ್ರೀಕಂಠಯ್ಯ ಕೂಡ ಕೆಆರ್ಎಸ್ ಪೊಲೀಸ್ ಠಾಣೆಯ ಪೊಲೀಸರ ಕ್ರಮಕ್ಕೆ ಆಕ್ರೋಶ ವ್ಯಕ್ತಪಡಿಸಿ, ಎಸ್ಪಿ ಯತೀಶ್ ರವರಿಗೆ ಕರೆ ಮಾಡಿ, ಮಳವಳ್ಳಿ ಪಟ್ಟಣದಲ್ಲಿ ಬಾಲಕಿ ಮೇಲೆ ನಡೆದ ಪೈಶಾಚಿಕ ಕೃತ್ಯ ಶ್ರೀರಂಗಪಟ್ಟಣದಲ್ಲೂ ನಡೆಯಬಾರದು ಎಂದು ಹೇಳಿ ಆರೋಪಿಯ ವಿರುದ್ಧ ಗರಿಷ್ಠ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದರು.
ಇದನ್ನೂ ಓದಿ: ಪೋಕ್ಸೊ ಪ್ರಕರಣದ ಆರೋಪಿಗೆ ಜಾಮೀನು: ಶಾಸಕ ಗರಂ
ಶಾಸಕ ರವೀಂದ್ರ ಶ್ರೀಕಂಠಯ್ಯನವರ ಅಭಿಪ್ರಾಯಕ್ಕೆ ಕಾನೂನು ತಜ್ಞರು ಮತ್ತು ಜನತೆ ಕೂಡ ಸಹಮತ ವ್ಯಕ್ತಪಡಿಸಿ ಆರೋಪಿಯನ್ನು ನ್ಯಾಯಾಧೀಶರ ಅವರು ಆತನ ಮೇಲೆ ಏನು ಕ್ರಮ ಕೈಗೊಳ್ಳುತ್ತಾರೋ ತೆಗೆದುಕೊಳ್ಳಲಿ. ಅದು ಬಿಟ್ಟು ಪೋಲೀಸರು ಆರೋಪಿಗೆ ನೋಟಿಸ್ ನೀಡಿ ಕಳುಹಿಸಿದ್ದರ ಹಿಂದೆ ರಾಜಕೀಯ ಒತ್ತಡವಿದೆ ಎಂಬ ಮಾತುಗಳು ಕೂಡ ಜನರಿಂದ ಕೇಳಿ ಬರುತ್ತಿದೆ.
ಜಿಲ್ಲೆಯಲ್ಲಿ ಹಲವು ಪೋಸ್ಕೊ ಪ್ರಕರಣಗಳು ದಾಖಲಾಗಿವೆ.ಆ ಪ್ರಕರಣಗಳಲ್ಲಿ ಆರೋಪಿಗಳನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿ, ಈ ಪ್ರಕರಣದಲ್ಲಿ ಮಾತ್ರ ನ್ಯಾಯಾಧೀಶರ ಮುಂದೆ ಏಕೆ ಹಾಜರುಪಡಿಸಿಲ್ಲ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ.
ಕೆ ಆರ್ ಎಸ್ ಠಾಣೆ ಪೊಲೀಸರು ಆರೋಪಿಯನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಿ. ಅವರು ನೀಡುವ ಆದೇಶದಂತೆ ಮುಂದುವರಿಯಬೇಕೆಂಬುದು ಜನರ ಅಭಿಪ್ರಾಯವಾಗಿದೆ.