ವಿದ್ಯಾವಂತರಿಂದ ರಾಷ್ಟ್ರ ಸದೃಢವಾಗುತ್ತದೆ. ಯುವ ಪೀಳಿಗೆ ಭವ್ಯ ಭಾರತದ ಕಲ್ಪನೆಯೊಂದಿಗೆ ಭಾರತದಲ್ಲಿ ಸತ್ಪ್ರಜೆಯಾಗಿ ದೇಶವನ್ನು ಮುನ್ನಡೆಸಬೇಕು. ಇಂದಿನ ಯುವ ಪೀಳಿಗೆಯೇ ಭಾರತದ ಸಂಪತ್ತು ಎಂದು ಇಂಧನ ಮತ್ತು ಬೃಹತ್ ಕೈಗಾರಿಕೆಗಳ ರಾಜ್ಯ ಸಚಿವ ಕ್ರಿಶನ್ ಪಾಲ್ ಗುರ್ಜರ್ ತಿಳಿಸಿದರು.
ಮದ್ದೂರು ತಾಲ್ಲೂಕಿನ ಭಾರತಿ ನಗರದ ಭಾರತಿ ಕಾಲೇಜಿನಲ್ಲಿ ಕಾಲೇಜು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಅವರು ಮಾತನಾಡಿದರು.
ಭಾರತದಲ್ಲಿನ ಯುವ ಪೀಳಿಗೆಯು ಬಹಳ ಬಲಿಷ್ಟವಾದದ್ದು, 58 ಕೋಟಿ ಯುವ ಜನಸಂಖ್ಯೆಯನ್ನು ಕಾಣುತ್ತೇವೆ. ಭಾರತದ ಭವಿಷ್ಯದ ಮುಂದೆ ನಿಂತು ಮಾತನಾಡುತ್ತಿರುವುದು ನನಗೆ ಸಂತಸ ತಂದಿದೆ. ಯುವ ಪೀಳಿಗೆಯನ್ನು ಸದೃಢಪಡಿಸಲು ಹಾಗೂ ಅವರಿಗೆ ಉತ್ತಮವಾದ ಉದ್ಯೋಗವನ್ನು ಕಲ್ಪಿಸುವ ದೃಷ್ಟಿಯಿಂದ ಪ್ರಧಾನಿ ನರೇಂದ್ರ ಮೋದಿ ಆವರು ಆತ್ಮ ನಿರ್ಭರ ಭಾರತ್ ಎಂಬಂತಹ ಮಹತ್ವಪೂರ್ಣವಾದ ಯೋಜನೆಯನ್ನು ಜಾರಿಗೆ ತಂದಿದ್ದಾರೆ ಎಂದು ಹೇಳಿದರು.
ತಾಂತ್ರಿಕ ಶಿಕ್ಷಣವನ್ನು ವಿದ್ಯಾರ್ಥಿಗಳು ಹೇಗೆ ಅಳವಡಿಸಿಕೊಳ್ಳಬೇಕು ಹಾಗೂ ಅದರಿಂದ ಯಾವ ರೀತಿಯಾಗಿ ವ್ಯವಹಾರವನ್ನು ಮಾಡಬಹುದು ಎಂಬುದನ್ನು ಅರಿತುಕೊಳ್ಳಲು ಹಾಗೂ ಹಣದ ವ್ಯವಹಾರ ಸುಲಲಿತವಾಗಿ ನಡೆಯಲು ಡಿಜಿಟಲ್ ಮಾಧ್ಯಮವನ್ನು ಮೋದಿ ಅವರು ಪರಿಚಯಿಸಿದ್ದಾರೆ ಎಂದರು.
ದೇಶ ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳ ಕೈಯಲ್ಲಿರುತ್ತದೆ. ಅವರು ದೇಶದ ಬೆಳವಣಿಗೆಯ ಬಗ್ಗೆ ಇಂದೇ ಚಿಂತಿಸಬೇಕು. ನಮ್ಮ ದೇಶ ವಿಶ್ವದಲ್ಲೇ ಸರ್ವಶ್ರೇಷ್ಠ ಹಾಗೂ ಶಕ್ತಿಶಾಲಿಯಾಗಿ ಹೊರಹೊಮ್ಮಬೇಕು. ಇದಕ್ಕಾಗಿ ಉತ್ತಮ ನಾಯಕರನ್ನು ಆಯ್ಕೆಮಾಡಬೇಕು. ಆಯ್ಕೆಯಾಗುವ ಉತ್ತಮ ನಾಯಕ ತನ್ನ ದೇಶಕ್ಕೆ ಮೊದಲ ಸ್ಥಾನ ನೀಡಬೇಕು ಎಂದರು.
ಭಾರತಿ ಕಾಲೇಜಿನ ವಿದ್ಯಾರ್ಥಿಗಳಾದ ಸುದೀರ್, ಯಶ್ವಂತ್, ಚಂದನ್, ತೇಜಸ್ವಿನಿ, ಶಿವಾನಂದ ಹಾಗೂ ಇನ್ನಿತರರು ಕೇಂದ್ರ ಸರ್ಕಾರದ ಯೋಜನೆಗಳ ಕುರಿತು ಪ್ರಶ್ನೆಗಳನ್ನು ಕೇಳಿದ ಸಂದರ್ಭದಲ್ಲಿ ಸಚಿವರು ವಿದ್ಯಾರ್ಥಿಗಳು ಪ್ರಶ್ನೆಗೆ ಉತ್ತರಿಸಿ ಅವರ ಗೊಂದಲಗಳನ್ನು ಬಗೆಹರಿಸಿದರು.
ಸಂವಾದದಲ್ಲಿ ವಿಧಾನ ಪರಿಷತ್ ಸದಸ್ಯರಾದ ಮಧು ಜಿ.ಮಾದೇಗೌಡ, ಸಿ.ಪಿ.ಯೋಗೇಶ್ವರ್ , ಉಪವಿಭಾಗಾಧಿಕಾರಿ ಆರ್.ಐಶ್ವರ್ಯ, ತಹಶೀದ್ದಾರ್ ಟಿ.ಎನ್.ನರಸಿಂಹಮೂರ್ತಿ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಬಿ.ರಂಗೇಗೌಡ, ಹಿಂದುಳಿದ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಶ್ರೀನಿವಾಸ್, ಪ್ರಾಂಶುಪಾಲರಾದ ಆರ್.ವಿ.ಪ್ರವೀಣ್ ಗೌಡ, ರಾಮಕೃಷ್ಣ ,ಗ್ರಾ.ಪಂ.ಅಧ್ಯಕ್ಷ ವೆಂಕಟೇಶ್ ಉಪಸ್ಥಿತರಿದ್ದರು.