ಮಂಡ್ಯ ಜಿಲ್ಲೆಯಾದ್ಯಂತ 12,000 ಕ್ಕೂ ಹೆಚ್ಚು ರೈತರು ಜಮೀನುಗಳ ಅಳತೆ, ದುರಸ್ತು, ಪೋಡಿ ಮಾಡಿ ಖಾತೆ ಮಾಡಲು ಅರ್ಜಿ ಸಲ್ಲಿಸಿರುವ ಬಗ್ಗೆ ಕಂದಾಯ ಸಚಿವ ಆರ್.ಅಶೋಕ್ ಅವರಿಗೆ ಮನವಿ ಮಾಡಿದ್ದು, ಅವರು ಜಿಲ್ಲೆಗೆ 78 ಸರ್ವೆಯರ್ ಗಳನ್ನು ನೇಮಕ ಮಾಡಿರುವುದಾಗಿ ತಿಳಿಸಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ತಿಳಿಸಿದರು.
ರೈತರು ಸರ್ಕಾರಕ್ಕೆ ನಿಗದಿತ ಶುಲ್ಕವನ್ನು ಪಾವತಿಸಿ ತಮ್ಮ ಜಮೀನುಗಳನ್ನು ಅಳತೆ ಮಾಡಿ, ದುರಸ್ತು ಪಡಿಸಿ, ಜಮೀನುಗಳನ್ನು ಗುರುತು ಮಾಡಿಕೊಡುವಂತೆ ಅರ್ಜಿಗಳನ್ನು ಸಲ್ಲಿಸಿದ್ದರೂ ಸಹ, ಹಲವಾರು ತಿಂಗಳುಗಳಿಂದ ಕೆಲಸವಾಗದೆ ಬಾಕಿ ಉಳಿದಿರುತ್ತವೆ. ಈ ಬಗ್ಗೆ ಜಿಲ್ಲಾಡಳಿತದ ಗಮನಕ್ಕೆ ತಂದಾಗ ಸರ್ವೇಯರ್ಗಳ ಕೊರತೆ ಬಗ್ಗೆ ಹೇಳಿದ್ದರು. ಇದನ್ನ ಕಂದಾಯ ಸಚಿವ ಆರ್.ಅಶೋಕ್ ಅವರ ಗಮನಕ್ಕೆ ತಂದಾಗ ಅವರು 78 ಸರ್ವೆಯರ್ ನೇಮಕವಾಗಿದೆ. ಇನ್ನು ಎರಡು ತಿಂಗಳಲ್ಲಿ ಎಲ್ಲಾ ಅರ್ಜಿಗಳು ವಿಲೇವಾರಿ ಆಗಲಿದೆ ಎಂದು ಭರವಸೆ ನೀಡಿದ್ದಾರೆ ಎಂದರು.