ಪ್ರಧಾನಿ ನರೇಂದ್ರ ಮೋದಿಯವರು ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿಗೆ ಇಂದು ಬೆಳಿಗ್ಗೆ ಉದ್ಘಾಟನೆ ಮಾಡಿದ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ, ಮಂಡ್ಯ ಮೂಲಕ ಮೈಸೂರಿಗೆ ತೆರಳುತ್ತಿದ್ದ ಎಲ್ಲಾ ರೈಲುಗಳು 1ರಿಂದ 4 ಗಂಟೆ ತಡವಾದ ಹಿನ್ನೆಲೆಯಲ್ಲಿ ಪ್ರಯಾಣಿಕರು ಪರದಾಡಿದರು.
ಬೆಂಗಳೂರಿನಿಂದ ಮಂಡ್ಯಕ್ಕೆ ಬೆಳಿಗ್ಗೆ 9.30 ಬರಬೇಕಾಗಿದ್ದ ಗೋಲ್ ಗುಂಬಜ್ ರೈಲು ಮಧ್ಯಾಹ್ನ 1.30ಕ್ಕೆ ಬಂದಿತು.
ಬಸವ ಎಕ್ಸ್ಪ್ರೆಸ್ ರೈಲು ಬೆಳಿಗ್ಗೆ 10.15ರ ಹೊತ್ತಿಗೆ ಮಂಡ್ಯಕ್ಕೆ ಬರಬೇಕಾಗಿತ್ತು. ಆದರೆ ಇದು ಬಂದದ್ದು ಮಧ್ಯಾಹ್ನ 1.50ಕ್ಕೆ. ಹಾಗೆಯೇ ಕೂಚುವೇಲಿ ಎಕ್ಸ್ಪ್ರೆಸ್ ಬೆಂಗಳೂರು ಬಿಟ್ಟು 10.10ಕ್ಕೆ ಮಂಡ್ಯಕ್ಕೆ ಬರಬೇಕಿತ್ತು. ಆದರೆ ಈ ರೈಲು ಮಧ್ಯಾಹ್ನ ಬಂದಾಗ ಮಧ್ಯಾಹ್ನ 2.05 ಆಗಿತ್ತು.
ಇದಲ್ಲದೆ ಬೆಳಿಗ್ಗೆ 7:30ಕ್ಕೆ ಮಂಡ್ಯಕ್ಕೆ ಬರಬೇಕಿದ್ದ ಚಾಮುಂಡಿ ಎಕ್ಸ್ಪ್ರೆಸ್ ರೈಲು ಎರಡು ಗಂಟೆ ತಡವಾಗಿ ಬೆಳಿಗ್ಗೆ 9:30ಕ್ಕೆ ಬಂದರೆ,ಮಾಲ್ಗುಡಿ ಎಕ್ಸ್ಪ್ರೆಸ್ ರೈಲುಗಾಡಿಯು 9ಕ್ಕೆ ಬರುವ ಬದಲು ಒಂದು ಗಂಟೆ ತಡವಾಗಿ 10 ಗಂಟೆಗೆ ಬಂದಿತು.
ಮಂಡ್ಯದಿಂದ ಮೈಸೂರಿಗೆ ಟ್ಯುಟಿಕಾರನ್, ಮೆಮೊ ಎಕ್ಸ್ಪ್ರೆಸ್ ಗಳು ನಿಗದಿತವಾಗಿ ಎಂದಿನಂತೆ ಪ್ರಯಾಣ ಇತ್ತು.
ಎಲ್ಲಾ ರೈಲುಗಳು ಒಂದರಿಂದ ನಾಲ್ಕು ಗಂಟೆ ತಡವಾಗಿ ಬಂದ ಕಾರಣ ರೈಲು ಪ್ರಯಾಣಿಕರು ತೀವ್ರ ಪರಿಪಾಟಲು ಅನುಭವಿಸಿದರು.
ಬಹುತೇಕರು ರೈಲು ನಿಲ್ದಾಣದಿಂದ ಬಸ್ ನಿಲ್ದಾಣಗಳಿಗೆ ತೆರಳಿ ಸಂಚರಿಸಿದರೆ,ಬಸ್ ಚಾರ್ಜ್ ಹೆಚ್ಚು ಎನ್ನುವವರು ಬೈದುಕೊಂಡು ಗಂಟೆಗಟ್ಟಲೆ ರೈಲು ನಿಲ್ದಾಣದಲ್ಲಿ ಕಾದು ರೈಲಿನಲ್ಲಿಯೇ ಪ್ರಯಾಣಿಸಿದರು.