Thursday, May 16, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ | ನಶೆಯಲ್ಲಿದ್ದ ವ್ಯಕ್ತಿಯಿಂದ ಅಡ್ಡಾದಿಡ್ಡಿ ಕಾರು ಚಲಾವಣೆ: ಹಲವು ವಾಹನಗಳು ಜಖಂ

ನಶೆಯಲ್ಲಿದ್ದ ವ್ಯಕ್ತಿಯೊಬ್ಬ ಅಡ್ಡಾದಿಡ್ಡಿಯಾಗಿ ಕಾರು ಚಲಾಯಿಸಿ ಹಲವು ವಾಹನಗಳಿಗೆ ಗುದ್ದಿ ದಾಂಧಲೆ ಮಾಡಿರುವ ಘಟನೆ ಇಂದು ರಾತ್ರಿ 9 ಗಂಟೆ ಸುಮಾರಿಗೆ ಮಂಡ್ಯ ನಗರದ ಪೇಟೆ ಬೀದಿಯಲ್ಲಿ ನಡೆದಿದೆ.

ಬೆಂಗಳೂರು ಮೂಲದ ವ್ಯಕ್ತಿಯೊಬ್ಬ ಇಂದು ರಾತ್ರಿ ಮಂಡ್ಯದ ರೈಲ್ವೆ ಸ್ಟೇಷನ್ ರಸ್ತೆಯಲ್ಲಿ ಮಹೀಂದ್ರ ಎಸ್‌ಯುವಿ (ಕೆಎ- 22 ಪಿ-7753) ಕಾರನ್ನು ಅಡ್ಡಾದಿಡ್ಡಿಯಾಗಿ ಚಲಾಯಿಸಿಕೊಂಡು ಬಂದಿದ್ದಾನೆ. ರಸ್ತೆಯಲ್ಲಿದ್ದ ಜನರು ನಿನ್ನ ಕೈಯಲ್ಲಿ ಕಾರು ಚಲಾಯಿಸಲು ಆಗುವುದಿಲ್ಲ. ಬೇರೊಬ್ಬರನ್ನು ಕರೆಸಿ ಕಾರ್ ಚಲಾಯಿಸಿಕೊಂಡು ಹೋಗು ಎಂದು ಹೇಳಿದ್ದಾರೆ.

ಇದನ್ನು ಕೇಳದ ಆತನೇ ರೈಲ್ವೆ ಸ್ಟೇಷನ್ ರಸ್ತೆಯಲ್ಲಿ ಪೇಟೆ ಬೀದಿ ಕಡೆಗೆ ಕಾರು ಚಲಾಯಿಸಿಕೊಂಡು ಸಾಗಿದ್ದಾನೆ.ನಶೆಯಲ್ಲಿದ್ದ ಕಾರಣ ಕಾರು ನಿಯಂತ್ರಣ ತಪ್ಪಿ ಮೊದಲು ಆಟೋಗೆ ಗುದ್ದಿದೆ. ನಂತರ ಅಂಗಡಿಯೊಂದಕ್ಕೆ ಗುದ್ದಿದ್ದಾನೆ. ಜನರೆಲ್ಲ ಸೇರಿ ಕೂಗಿಕೊಂಡಾಗ ಕಾರನ್ನು ರಿವರ್ಸ್ ತೆಗೆದು ಜೈನರ ಬೀದಿಯ ಒಂದನೇ ಕ್ರಾಸ್ ಗೆ ನುಗ್ಗಿ ಬೊಲೆರೋ ಕಾರಿಗೆ,ಸ್ಕೂಟರ್ ಗೆ ಗುದ್ದಿ ಜಖಂ ಮಾಡಿದ್ದಾನೆ.  ಅಲ್ಲಿಂದ ಚಂದನ್ ಎಲೆಕ್ಟ್ರಾನಿಕ್ ಪಕ್ಕದ ಟೀ ಅಂಗಡಿಗೆ ಗುದ್ದಿದ್ದಾನೆ. ಇದರಿಂದ ಈ ಅಂಗಡಿಯಲ್ಲಿದ್ದ ಯುವಕನ ಕಾಲಿಗೆ ಸ್ವಲ್ಪ ಗಾಯವಾಗಿದೆ. ನಂತರ ಪಕ್ಕದಲ್ಲಿದ್ದ ಹೋಂಡಾ ಆಕ್ಟಿವ ಸ್ಕೂಟರ್ ಸಮೇತ ಅಂಗಡಿಯ ರೋಲಿಂಗ್ ಶಟರ್ ಗೆ ಡಿಕ್ಕಿ ಹೊಡೆದ ನಂತರ ಕಾರು ನಿಂತಿದೆ.

ನಶೆಯಲ್ಲಿದ್ದ ಕಾರು ಚಾಲಕನಿಗೆ ಜನರು ಧರ್ಮದೇಟು ನೀಡಿರುವುದು

ಸ್ಥಳದಲ್ಲಿದ್ದ ಜನರು ನಶೆಯಲ್ಲಿ ಕಾರು ಚಲಾಯಿಸುತ್ತಿದ್ದ ವ್ಯಕ್ತಿಯನ್ನು ಹೊರಗೆ ಎಳೆದು ಧರ್ಮದೇಟು ನೀಡಿದ್ದಾರೆ. ನಂತರ ವಿಷಯ ತಿಳಿದ ಅಲ್ಲಿಗೆ ಬಂದ ಪೊಲೀಸರ ಕೈಗೆ ಆತನನ್ನು ಒಪ್ಪಿಸಿದ್ದಾರೆ.

ಕಾರಿನ ಚಾಲಕನ ಹೆಸರು ತಿಳಿದು ಬಂದಿಲ್ಲ.ಆತ ಗಾಂಜಾ ಅಥವಾ ಮದ್ಯದ ಅಮಲಿನಲ್ಲಿ ಅಡ್ಡಾದಿಡ್ಡಿಯಾಗಿ ಕಾರು ಚಲಾಯಿಸಿ ಇಷ್ಟೆಲ್ಲಾ ಅವಾಂತರಗಳಿಗೆ ಕಾರಣನಾಗಿದ್ದಾನೆ ಎಂದು ಸ್ಥಳದಲ್ಲಿದ್ದ ಜನರು ನುಡಿ ಕರ್ನಾಟಕ.ಕಾಮ್ ಗೆ ತಿಳಿಸಿದರು

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!