ಕೆರೆ ಅಭಿವೃದ್ದಿ ಕಾಮಗಾರಿಯ ವೇಳೆ ಮಣ್ಣು ಸುರಿಯುತ್ತಿದ್ದ ಟಿಪ್ಪರ್ ಗೆ ವಿದ್ಯುತ್ ತಂತಿ ತಗುಲಿ ವಿದ್ಯುತ್ ಪ್ರವಹಿಸಿದ ಪರಿಣಾಮ ಟಿಪ್ಪರ್ ಚಾಲಕ ಮೃತಪಟ್ಟ ಘಟನೆ ಕೆ.ಆರ್.ಪೇಟೆ ಪಟ್ಟಣದ ಪುರಸಭಾ ವ್ಯಾಪ್ತಿಯ ಹೊಸಹೊಳಲಿನಲ್ಲಿ ನಡೆದಿದೆ.
ಬಿಜಾಪುರ ಜಿಲ್ಲೆಯ ಇಂಡಿ ತಾಲೂಕಿನ ಬಬಲಾದಿ ಗ್ರಾಮದ ಕಾಂತಪ್ಪ(35) ಮೃತಪಟ್ಟವರು. ಕೆರೆಯ ಸುತ್ತ ವಾಕಿಂಗ್ ಪಾಥ್ ನಿರ್ಮಿಸಲು ಅಗತ್ಯವಾದ ಮಣ್ಣನ್ನು, ಟಿಪ್ಪರ್ ನಿಂದ ತಂದು ಕೆಳಗೆ ಸುರಿಯುವುದಕ್ಕಾಗಿ ಚಾಲಕ್ ಟಿಪ್ಪರ್ ಲಿಫ್ಟ್ ಎತ್ತಿದ್ದಾನೆ. ಈ ಸಂದರ್ಭದಲ್ಲಿ ಮೇಲೆ ಹಾದುಹೋಗಿದ್ದ ವಿದ್ಯುತ್ ತಂತಿಯನ್ನು ಚಾಲಕ ಗಮನಿಸದೆ, ಲಿಫ್ಟ್ ಎತ್ತಿದ ಪರಿಣಾಮ ಟಿಪ್ಪರ್ ಗೆ ವಿದ್ಯುತ್ ಪ್ರವಹಿಸಿದೆ.
ವಿದ್ಯುತ್ ಆಘಾತಕ್ಕೆ ಒಳಗಾಗಿ ಪ್ರಜ್ಞಾಹೀನನಾಗಿದ್ದ ಚಾಲಕ ಕಾಂತಪ್ಪ ಅವರನ್ನು ತಕ್ಷಣವೇ ಕೆ.ಆರ್.ಪೇಟೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೆ ಕಾಂತಪ್ಪ ಮೃತಪಟ್ಟಿದ್ದಾನೆ. ಕೆ.ಆರ್.ಪೇಟೆ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಸಾರ್ವಜನಿಕ ಆಸ್ಪತ್ರೆಯ ಶವಾಗಾರದಲ್ಲಿ ಕಾಂತರಾಜು ಶವವನ್ನು ಮರಣೋತ್ತರ ಪರೀಕ್ಷೆಗಾಗಿ ತರಲಾಗಿದೆ.
ಸ್ಥಳಕ್ಕೆ ಬಾರದ ಎಂಜಿನಿಯರ್
ವಿದ್ಯುತ್ ಅವಘಡದಿಂದ ಕರ್ತವ್ಯ ನಿರತ ಚಾಲಕನೊಬ್ಬ ಮೃತಪಟ್ಟಿದ್ದರೂ ಸಣ್ಣ ನೀರಾವರಿ ಇಲಾಖೆಯ ಕಿರಿಯ ಎಂಜಿಯರ್ ಅಜರುದ್ದೀನ್ ಸ್ಥಳಕ್ಕೆ ಬಂದು ಪರಿಶೀಲನೆ ಮಾಡಲಿಲ್ಲ. ಆಸ್ಪತ್ರೆಗೆ ಬಂದು ವಿಚಾರಿಸುವ ಕನಿಷ್ಠ ಸೌಜನ್ಯವನ್ನೂ ಎಂಜಿನಿಯರ್ ತೋರಿಸಿಲ್ಲ. ನಿಯಮಾನುಸಾರ ಎಂಜಿನಿಯರ್ ಸ್ಥಳದಲ್ಲಿದ್ದು ಕಾಮಗಾರಿಯ ನಿರ್ವಹಣೆಯನ್ನು ಪರಿಶೀಲಿಸಬೇಕು. ಆದರೆ ಎಂಜಿನಿಯರ್ ನಿರ್ಲಕ್ಷ್ಯವಹಿಸಿದ್ದಾರೆಂದು ಸ್ಥಳೀಯರು ಆರೋಪಿಸಿದ್ದಾರೆ.