ಮಂಡ್ಯದ ಮಹಿಳೆಯೊಬ್ಬರು ತನ್ನ ಮಗನಿಗೆ ಸರ್ಕಾರಿ ಕೆಲಸ ಕೊಡಿಸಲು ಹೋಗಿ ಹಣ,ಚಿನ್ನಾಭರಣ ಕಳೆದುಕೊಂಡು ಮೈಸೂರು ಪೋಲಿಸರಿಗೆ ದೂರು ನೀಡಿರುವ ಘಟನೆ ವರದಿಯಾಗಿದೆ.
ನನ್ನ ಮಗನಿಗೆ ಎಸ್ಡಿಎ ಕೆಲಸ ಕೊಡಿಸುವುದಾಗಿ ನಂಬಿಸಿ, ಹಣ ಪಡೆದು ವಂಚಿಸಿದ್ದಾರೆ ಎಂದು ಯಶಸ್ವಿನಿ ಗೃಹ ನಿರ್ಮಾಣ ಸಹಕಾರ ಸಂಘದ ಪದಾಧಿಕಾರಿ ಬಿ.ಎಸ್. ಲೋಕೇಶ್ವರ ವಿರುದ್ಧ ಮಂಡ್ಯದ ಕೆಎಚ್ಬಿ ಕಾಲೋನಿಯ ಚಂದ್ರಕಲಾ ಎಂಬಾಕೆ ಮೈಸೂರಿನ ಆಲನಹಳ್ಳಿ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ಕೆಲ ವರ್ಷಗಳ ಹಿಂದೆ ಮಂಡ್ಯದಲ್ಲಿಯೇ ಇದ್ದ ಬಿ.ಎಸ್.ಲೋಕೇಶ್ವರ ಈಗ ಮೈಸೂರಿನ ನಿವಾಸಿ, ಮಂಡ್ಯ ಸಿಟಿ ಕೋ ಆಪರೇಟಿವ್ ಬ್ಯಾಂಕ್ ನ ಮಾಜಿ ಅಧ್ಯಕ್ಷನೂ ಆದ ಬಿ.ಎಸ್.ಲೋಕೇಶ್ವರ ಮಂಡ್ಯ ನಗರದ ಕೆ ಎಚ್ ಬಿ ಕಾಲೋನಿಯ ನಿವಾಸಿ ಚಂದ್ರಕಲಾ ಎಂಬುವರಿಂದ 2017ರಲ್ಲಿ ಅವರ ಮಗನಿಗೆ ಕೆಲಸ ಕೊಡಿಸುವುದಾಗಿ ತಿಳಿಸಿ, 5 ಲಕ್ಷ ಕೊಟ್ಟರೆ ಖಾಯಂ ಮಾಡುವುದಾಗಿ ಭರವಸೆ ನೀಡಿದ್ದರು.
ಅದರಂತೆ ಸಂಘದಲ್ಲಿ ಕೆಲಸ ಕೊಡಿಸಿ, ಹುದ್ದೆ ಕಾಯಂ ಮಾಡಲು 2.20 ಲಕ್ಷ ನಗದು, 300 ಗ್ರಾಂ ಚಿನ್ನ ಪಡೆದಿದ್ದರು. 2018ರಲ್ಲಿ ಕೆಲಸ ಖಾಯಂಮಾತಿ ಬಗ್ಗೆ ವಿಚಾರಿಸಿದ ವೇಳೆ ಸುಮ್ಮನಾಗಿದ್ದರು. ನಂತರ ಹಣ ಹಿಂತಿರುಗಿಸುವಂತೆ ಒತ್ತಾಯಿಸಿದಾಗ, 1.5 ಲಕ್ಷ ರೂ. ನಗದು, 169 ಗ್ರಾಂ ಚಿನ್ನ ಹಿಂದಕ್ಕೆ ನೀಡಿದ್ದರು. ಉಳಿದ 70 ಸಾವಿರ ನಗದು ಹಾಗೂ 131 ಗ್ರಾಂ ಚಿನ್ನ ನೀಡದೆ ವಂಚಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ವಂಚನೆ ಸಂಬಂಧ ಬಿ.ಎಸ್.ಲೋಕೇಶ್ವರ ಮೇಲೆ ಪ್ರಕರಣ ದಾಖಲಾಗಿದೆ.