ವಚನ ಸಾಹಿತ್ಯ ದೇಶದಲ್ಲಿ ಉಳಿದಿದೆ ಎಂದರೆ ಅದಕ್ಕೆ ಮಡಿವಾಳ ಮಾಚಿದೇವರು ಕಾರಣ ಎಂದು ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯ ಡಾ.ಹೆಚ್. ರವಿಕುಮಾರ್ ಹೇಳಿದರು.
ಮಂಡ್ಯ ನಗರದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಮಡಿವಾಳ ಮಾಚಿದೇವ ಸರ್ಕಾರಿ, ಅರೆ ಸರ್ಕಾರಿ ಮತ್ತು ನಿವೃತ್ತ ನೌಕರರ ಪತ್ತಿನ ಸಹಕಾರ ಸಂಘದ ವತಿಯಿಂದ ನಡೆದ 67ನೇ ಕನ್ನಡ ರಾಜ್ಯೋತ್ಸವ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, 12ನೇ ಶತಮಾನದಲ್ಲಿ ವಚನ ಸಾಹಿತ್ಯವನ್ನು ರಕ್ಷಿಸಿದ ಪವಾಡ ಪುರುಷ ಹಾಗೂ ಮನುಕುಲ ರಕ್ಷಿಸಿದವರು ಮಡಿವಾಳ ಮಾಚಿದೇವರು ಎಂದು ಹೇಳಿದರು.
ಬದ್ಧತೆ ಇಲ್ಲದೆ ಹೋದರೆ ಯಾವುದೇ ಸಂಘಗಳು ನಡೆಯುವುದು ಕಷ್ಟ. ಆದ್ದರಿಂದ ಸಂಘಗಳಲ್ಲಿ ನಂಬಿಕೆ, ಪ್ರಾಮಾಣಿಕತೆ ಇದ್ದರೆ ಜನರು ಮುಂದೆ ಬರುತ್ತಾರೆ ಎಂದು ಹೇಳಿದರು.
ಮಡಿವಾಳ ಸಮಾಜದವರು ಸಂಘಟಿತರಾಗುವ ಮೂಲಕ ಒಗ್ಗಟ್ಟು ಪ್ರದರ್ಶನ ಮಾಡಬೇಕು.
ಜಿಲ್ಲೆಯಲ್ಲಿ ಮಡಿವಾಳ ಸಮಾಜ ಗಣನೀಯವಾದ ಸಂಖ್ಯೆಯಲ್ಲಿ ಇದೆ, ಎಲ್ಲರನ್ನು ಒಗ್ಗೂಡಿಸುವ ಪ್ರಯತ್ನ ಮಾಡಿ ಎಂದು ತಿಳಿ ಹೇಳಿದರು.
ಬಸವಕಲ್ಯಾಣದಲ್ಲಿ ಆದ ಕ್ರಾಂತಿಗೆ ಮಡಿವಾಳ ಮಾಚಿ ದೇವರು ಕಾರಣ. ಮಡಿವಾಳ ಮಾಚಿದೇವರ 546 ವಚನಗಳು ಸಿಕ್ಕಿವೆ, ಮಡಿವಾಳ ಮಾಚಿದೇವರ ವಚನಗಳ ಬಗ್ಗೆ ಇನ್ನು ಸಂಶೋಧನೆ ಆಗುತ್ತಿವೆ ಎಂದರು.
ಮಡಿವಾಳ ಮಾಚಿದೇವರ ಬಗ್ಗೆ ಜನಾಂಗದಲ್ಲೆ ಅರಿವು ಇಲ್ಲದೆ ಇರುವುದು ವಿಪರ್ಯಾಸದ ಸಂಗತಿ, ಇದರ ಬಗ್ಗೆ ಜಾಗೃತಿ ಮೂಡಿಸುವ ಕೆಲಸಗಳು ಆಗಬೇಕು ಎಂದು ಹೇಳಿದರು.
ಮಡಿವಾಳ ಜನಾಂಗದವರು ಹಕ್ಕುಗಳನ್ನು ಕೇಳುವುದಕ್ಕೆ ಹಿಂಜರಿಕೆ ಬೇಡ, ಸಂವಿಧಾನದಲ್ಲಿ ಹಕ್ಕಿನ ಜೊತೆ ಕರ್ತವ್ಯ ಪಾಲಿಸುವುದು ಇದೆ.ಈ ನಿಟ್ಟಿನಲ್ಲಿ ಹಕ್ಕನ್ನು ಪಡೆಯಲು ಮುಂಚೂಣಿಯಲ್ಲಿ ನಿಲ್ಲಬೇಕು ಎಂದರು.
ಸಂಘದ ಅಧ್ಯಕ್ಷ ಉಮೇಶ್, ಮನ್ ಮುಲ್ ಅಧ್ಯಕ್ಷ ಬಿ.ಆರ್. ರಾಮಚಂದ್ರ, ಮುನ್ ಮುಲ್ ನಿರ್ದೇಶಕ ಯು.ಸಿ.ಶಿವಕುಮಾರ್, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಅಶೋಕ್ ಜಯರಾಮ್, ನಗರಸಭಾ ಸದಸ್ಯರಾದ ನಾಗೇಶ್, ಮಂಜುಳಾ, ಸೇರಿದಂತೆ ಇತರರು ಭಾಗವಹಿಸಿದ್ದರು.