ಮಂಡ್ಯ ನಗರದ ಆನೆಕೆರೆ ಬೀದಿಯ ಕಾರಿಮನೆ ಗೇಟ್ ಬಳಿ ರಸ್ತೆಯಲ್ಲಿದ್ದ ದೊಡ್ಡ ಗುಂಡಿಗೆ ನಿವೃತ್ತ ಯೋಧ ಬಲಿಯಾಗಿದ್ದಾರೆ. ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಯೋಧ ಸಾತನೂರು ಗ್ರಾಮದ ಎಸ್.ಎನ್.ಕುಮಾರ್(39) ಎಂಬುವರೇ ಮೃತಪಟ್ಟ ದುರ್ದೈವಿ.
ಇಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ನಿವೃತ್ತ ಯೋಧ ಎಸ್.ಎನ್.ಕುಮಾರ್ ತನ್ನ ತಂದೆಯ ಜೊತೆ ಮಂಡ್ಯದ ಕಾರೆಮನೆ ಗೇಟ್ ಮೂಲಕ ತೆರಳುತ್ತಿದ್ದಾಗ ರಸ್ತೆಯಲ್ಲಿದ್ದ ದೊಡ್ಡ ಗುಂಡಿ ತಪ್ಪಿಸಲು ಎಡಕ್ಕೆ ಬಂದಾಗ ಎದುರಿನಿಂದ ಬರುತ್ತಿದ್ದ ಬೈಕಿಗೆ ಢಿಕ್ಕಿ ಹೊಡೆದು ಕೆಳಕ್ಕೆ ಬಿದ್ದಿದ್ದಾರೆ. ಆಗ ಹಿಂದಿನಿಂದ ಕಾಯಿ ಮಟ್ಟೆ ತುಂಬಿಕೊಂಡು ಬರುತ್ತಿದ್ದ ಲಾರಿ ಯೋಧ ಕುಮಾರ್ ಅವರ ತಲೆ ಮೇಲೆ ಲಾರಿ ಹರಿದು ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ನಿವೃತ್ತ ಯೋಧ ಕುಮಾರ್ ಅವರ ತಂದೆಗೆ ಗಾಯವಾಗಿದ್ದು, ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಸಂಬಂಧ ಮಂಡ್ಯ ಸಂಚಾರಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತ ಯೋಧ ಕುಮಾರ್ ಅವರು ಸೇನೆಯಲ್ಲಿ ನಿವೃತ್ತಿ ಹೊಂದಿದ ನಂತರ ಪೋಲಿಸ್ ಇಲಾಖೆಗೆ ಪೇದೆಯಾಗಿ ಆಯ್ಕೆಯಾಗಿ ಬೆಂಗಳೂರಿನಲ್ಲಿ ತರಬೇತಿ ಪಡೆಯುತ್ತಿದ್ದರು.
ಇಂದು ತನ್ನ ಸ್ವಗ್ರಾಮಕ್ಕೆ ಬಂದಿದ್ದ ಕುಮಾರ್ ರಸ್ತೆಗುಂಡಿಗೆ ಬಲಿಯಾಗಿದ್ದಾರೆ. ಇದು ಸರ್ಕಾರವೇ ಮಾಡಿದ ಕೊಲೆ. ರಸ್ತೆಯಲ್ಲಿರುವ ಗುಂಡಿ ಮುಚ್ಚಿಸಿದ್ದರೆ ಕುಮಾರ್ ಅವರ ಸಾವು ಸಂಭವಿಸುತ್ತಿರಲಿಲ್ಲ. ಕುಮಾರ್ ಅವರ ಸಾವಿಗೆ ಸರ್ಕಾರವೇ ಕಾರಣವಾಗಿದೆ ಎಂದು ನಾಗರೀಕರು ಕಿಡಿಕಾರಿದರು.