ರೌಡಿ ಶೀಟರ್ ಗಳ ನಡುವೆ ಹಣಕಾಸಿನ ವಿಚಾರಕ್ಕಾಗಿ ಶುರುವಾದ ಜಗಳ ಮತ್ತೊಬ್ಬ ರೌಡಿ ಶೀಟರ್ ಕೊಲೆಯಲ್ಲಿ ಅಂತ್ಯವಾದ ಘಟನೆ ಭಾನುವಾರ ಸಂಜೆ ಮದ್ದೂರು ತಾಲೂಕಿನ ದೊಡ್ಡರಸಿನಕೆರೆ ಗ್ರಾಮದಲ್ಲಿ ನಡೆದಿದೆ.
ರೌಡಿ ಶೀಟರ್ ಅರುಣ್ ಅಲಿಯಾಸ್ ಕಪ್ಪೆ (23) ಹತ್ಯೆಗೀಡಾದವನು.
ಘಟನೆ ವಿವರ
ಮದ್ದೂರು ತಾಲ್ಲೂಕಿನ ದೊಡ್ಡರಸಿನಕೆರೆ ಗ್ರಾಮದ ರಮೇಶ್ ಎಂಬುವರ ಪುತ್ರ ರೌಡಿ ಶೀಟರ್ ಅರುಣ್ ಅಲಿಯಾಸ್ ಕಪ್ಪೆ ಹಾಗೂ ಅದೇ ಗ್ರಾಮದ ರೌಡಿ ಶೀಟರ್ ಗಳಾದ ದೊಡ್ಡಯ್ಯ ಮತ್ತು ದೇವರಾಜು ಅವರ ನಡುವೆ ನಿನ್ನೆ ಸಂಜೆ ಹಣಕಾಸಿನ ಕಾರಣಕ್ಕಾಗಿ ವಿ.ಎಸ್.ಎಸ್.ಎನ್ ಮುಂಭಾಗ ಮಾತಿನ ಚಕಮಕಿ ನಡೆದಿದೆ. ಚಕಮಕಿ ವಿಕೋಪಕ್ಕೆ ತಿರುಗಿ ಅರುಣ್ ಹಾಗೂ ದೊಡ್ಡಯ್ಯ, ದೇವರಾಜು ನಡುವೆ ಹೊಡೆದಾಟ ನಡೆದಿದೆ.
ಹೊಡೆದಾಟದಲ್ಲಿ ಅರುಣ್ ಅಲಿಯಾಸ್ ಕಪ್ಪೆಗೆ ದೇವರಾಜು ಮತ್ತು ದೊಡ್ಡಯ್ಯ ತೀವ್ರವಾಗಿ ಥಳಿಸಿದ್ದಾರೆ. ಈ ಸಂದರ್ಭದಲ್ಲಿ ಅರುಣ್ ಮೂಗಿನಲ್ಲಿ ತೀವ್ರವಾಗಿ ರಕ್ತಸ್ರಾವವಾಗಿದೆ. ಕೂಡಲೇ ಆತನನ್ನು ಚಿಕಿತ್ಸೆಗಾಗಿ ದೇವರಹಳ್ಳಿ ಮಾರ್ಗವಾಗಿ ಕೆ.ಎಂ.ದೊಡ್ಡಿಗೆ ಕರೆದುಕೊಂಡು ಹೋಗುತ್ತಿದ್ದಾಗ ಹಿಂಬಾಲಿಸಿ ಬಂದ ದೊಡ್ಡಯ್ಯ, ದೇವರಾಜು ಮತ್ತವರ ಸಂಗಡಿಗರು, ಎತ್ತಿನ ಗಾಡಿ ಕಡೇಗೂಟದಲ್ಲಿ ಮತ್ತೆ ಅರುಣ್ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದ್ದಾರೆ.
ಮಾರಣಾಂತಕವಾಗಿ ಗಾಯಗೊಂಡಿದ್ದ ಅರುಣ್ ಅವರಿಗೆ ಕೆ.ಎಂ.ದೊಡ್ಡಿಯ ಜಿ.ಮಾದೇಗೌಡ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ಮೈಸೂರಿನ ಅಪೋಲೋ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಅಪೋಲೋ ಆಸ್ಪತ್ರೆಯಲ್ಲಿ ಅರುಣ್ ಚಿಕಿತ್ಸೆ ಫಲಕಾರಿಯಾಗಿದೆ ಸಾವನ್ನಪ್ಪಿದ್ದಾನೆ . ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ಕೊಲೆಯಾದ ಅರುಣ್ ದೇಹದ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಒಪ್ಪಿಸಲಾಗಿದೆ.
ಅರುಣ್ ನನ್ನು ತೀವ್ರವಾಗಿ ಥಳಿಸಿ ಕೊಂದ ರೌಡಿಶೀಟರ್ ಗಳಾದ ದೊಡ್ಡಯ್ಯ, ದೇವರಾಜು ಹಾಗೂ ಮತ್ತವರ ಸಹಚರರು ಸೇರಿ 5 ಮಂದಿಯ ಮೇಲೆ ಕೆ.ಎಂ.ದೊಡ್ಡಿ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.
ಅರುಣ್ ಕೊಲೆ ಹಿನ್ನಲೆಯಲ್ಲಿ ದೊಡ್ಡರಸಿನಕೆರೆ ಗ್ರಾಮದಲ್ಲಿ ಬಿಗಿ ಪೊಲೀಸ್ ಬಂದೂಬಸ್ತ್ ಮಾಡಲಾಗಿದ್ದು, ಗ್ರಾಮದಲ್ಲಿ ಪ್ರಕ್ಷುಬ್ಧ ಪರಿಸ್ಥಿತಿ ನಿರ್ಮಾಣವಾಗಿದೆ.