ಮಳವಳ್ಳಿ ಕ್ಷೇತ್ರ ಅಭಿವೃದ್ಧಿಯಲ್ಲಿ ಹತ್ತು ವರ್ಷಗಳ ಹಿನ್ನಡೆ ಕಂಡಿದೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಡಿ ಗಂಗಾಧರ್ ಶಾಸಕ ಅನ್ನದಾನಿ ವಿರುದ್ಧ ಹರಿಹಾಯ್ದರು.
ಮಳವಳ್ಳಿ ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಸಂವಿಧಾನ ಅರ್ಪಣೆ ದಿನ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಸ್ಥಳೀಯ ಶಾಸಕರು ಯಾವುದೇ ಅಭಿವೃದ್ಧಿ ಕಾರ್ಯ ಮಾಡದೆ, ಸಾಮಾಜಿಕ ಸಾಮರಸ್ಯ ಹದೆಗೆಡಿಸುವ ನಿಟ್ಟಿನಲ್ಲಿ ಆಸಕ್ತಿ ವಹಿಸಿದ್ದಾರೆ.
ತಾಲ್ಲೂಕಿನಲ್ಲಿ ಅರಾಜಕತೆ ಸೃಷ್ಠಿಸುತ್ತಿದ್ದು,ಮಳವಳ್ಳಿ ತಾಲ್ಲೂಕಿನಲ್ಲಿ ಅಭಿವೃದ್ದಿ ಎಂಬುದು ಮರೀಚಿಕೆಯಾಗಿದೆ ಎಂದರು.
ಮಾಜಿ ಸಚಿವ ಪಿ.ಎಂ ನರೇಂದ್ರಸ್ವಾಮಿ ಅವರು ತಂದಿದ್ದ ಅಭಿವೃದ್ದಿ ಕಾರ್ಯಕ್ರಮಗಳನ್ನು ಮುಂದುವರೆಸುವ ಬದಲು,ಕಳಪೆ ಕಾಮಗಾರಿ ಮಾಡಿಸಿ, ಭ್ರಷ್ಟಾಚಾರದ ತಾಲ್ಲೂಕಾಗಿ ಮಾಡಿದ್ದಾರೆಂದು ದೂರಿದರು.
ತಾಲ್ಲೂಕಿನಾದ್ಯಂತ ರಸ್ತೆಗಳು ಗುಂಡಿ ಬಿದ್ದು, ಪ್ರಯಾಣಿಸುವುದೇ ಕಷ್ಟವಾಗಿದೆ, ಶಾಸಕರು ಕೊಟ್ಟಿದ್ದ ಭರವಸೆಗಳು ಇಂದಿಗೂ ಈಡೇರಿಲ್ಲ, ತಾಲ್ಲೂಕು ಅಭಿವೃದ್ದಿ ಕಾಣದೇ ಅತ್ಯಂತ ಭ್ರಷ್ಟ ಆಡಳಿತದಿಂದಾಗಿ ಹತ್ತು ವರ್ಷ ಹಿಂದಕ್ಕೆ ಹೋಗಿದೆ ಎಂದು ಕಿಡಿಕಾರಿದರು.
ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿ ಅವರು ಎರಡೂವರೆ ವರ್ಷ ಅಧಿಕಾರದಲ್ಲಿದ್ದರೂ ತಾಲ್ಲೂಕಿಗೆ ಯಾವುದೇ ಅಭಿವೃದ್ದಿ ಯೋಜನೆಗಳನ್ನು ನೀಡಿಲ್ಲ.ಬಂಡಾಯ ಕಾಂಗ್ರೆಸ್ ಮುಖಂಡರು ಎನಿಸಿಕೊಂಡಿರುವವರು ಹಿಂದಿನ ಚುನಾವಣೆಯಲ್ಲಿ ಬೇರೆ ಪಕ್ಷಕ್ಕೆ ಮತಯಾಚನೆ ಮಾಡಿರುವುದು ಬಹಿರಂಗ ವಿಚಾರ ಎಂದರು.
ಪತ್ರಿಕಾ ಗೋಷ್ಠಿಗೂ ಮುನ್ನ ಸಂವಿಧಾನ ಅರ್ಪಣೆ ದಿನದ ಪ್ರಯಕ್ತ ಡಾ. ಬಿಆರ್ ಅಂಬೇಡ್ಕರ್ ಭಾವಚಿತ್ರಕ್ಕೆ ಕಾಂಗ್ರೆಸ್ ನಾಯಕರು ಪುಷ್ಪಾರ್ಚನೆ ನೆರವೇರಿಸಿದರು.
ಕಾಂಗ್ರೆಸ್ ಎಸ್ಸಿ/ಎಸ್ಟಿ ಜಿಲ್ಲಾಧ್ಯಕ್ಷ ಸುರೇಶ್ ಕಂಠಿ, ಕಾಂಗ್ರೆಸ್ ಮುಖಂಡರಾದ ರಾಮಕೃಷ್ಣ, ಪ್ರಭುಲಿಂಗು, ಸಿ. ಮಾಧು, ಜಯರಾಜು, ಕೆಂಪಣ್ಣ,ಬಸರಾಜು, ಸತೀಶ್, ನಾಗರಾಜು, ಶಾಂತರಾಜು, ಕಿರಣ್ಶಂಕರ್ ಸೇರಿದಂತೆ ಇತರರಿದ್ದರು