ಮದ್ದೂರು ತಾಲ್ಲೂಕಿನ ಕೊಪ್ಪದ ಎನ್ಎಸ್ಎಲ್ ಕಾರ್ಖಾನೆಗೆ ಕಬ್ಬು ಕಟಾವು ಮಾಡಲು ಬಳ್ಳಾರಿಯಿಂದ ಬಂದಿದ್ದ ಕೂಲಿ ಕಾರ್ಮಿಕರು ಕ್ರಿಮಿನಾಶಕ ಮಿಶ್ರಿತ ನೀರು ಕುಡಿದು ಅಸ್ವಸ್ಥರಾಗಿ ಮಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮದ್ದೂರು ತಾಲೂಕಿನ ಕೊಪ್ಪ ಹೋಬಳಿಯ ಹೊಸಕೊಪ್ಪಲು ಗ್ರಾಮದಲ್ಲಿ ಇಂದು ಕಬ್ಬು ಕಟಾವು ಮಾಡುತ್ತಿದ್ದ ಕೂಲಿ ಕಾರ್ಮಿಕರು ಊಟದ ಸಮಯದಲ್ಲಿ ಗದ್ದೆಯ ಬಳಿ ಇದ್ದ ಡ್ರಮ್ ನಲ್ಲಿದ್ದ ನೀರು ಕುಡಿದಿದ್ದರು. ಕೆಲದಿನಗಳ ಹಿಂದಷ್ಟೇ ಗದ್ದೆಗೆ ಡ್ರಮ್ ನಲ್ಲಿ ಕ್ರಿಮಿನಾಶಕ ಸಿದ್ಧಪಡಿಸಿಕೊಂಡು ಸಿಂಪಡಿಸಲಾಗಿತ್ತು.
ನೀರು ಸೇವಿಸಿದ ಕೆಲವೇ ನಿಮಿಷದಲ್ಲಿ 7 ಮಕ್ಕಳು ಸೇರಿದಂತೆ 15 ಮಂದಿ ವಾಂತಿ-ಬೇಧಿಯಿಂದ ಅಸ್ವಸ್ಥಗೊಂಡರು. ಸ್ಥಳದಲ್ಲಿದವರು ಕೂಡಲೇ ಅಸ್ವಸ್ಥಗೊಂಡ ಕೂಲಿ ಕಾರ್ಮಿಕರು ಮತ್ತು ಮಕ್ಕಳನ್ನು ಮಂಡ್ಯ ಮಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಕೂಲಿ ಕಾರ್ಮಿಕರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮಕ್ಕಳ ವಾರ್ಡ್ ಗೆ ಮಿಮ್ಸ್ ನಿರ್ದೇಶಕ ಡಾ. ಮಹೇಂದ್ರ ಭೇಟಿ ನೀಡಿ ಪರಿಶೀಲನೆ ನಡೆಸಿ, ಮಕ್ಕಳು ಸೇರಿದಂತೆ ಅಸ್ವಸ್ಥಗೊಂಡವರಿಗೆ ಸೂಕ್ತ ರೀತಿಯ ಚಿಕಿತ್ಸೆ ನೀಡುವಂತೆ ವೈದ್ಯರಿಗೆ ಸೂಚಿಸಿದ್ದಾರೆ.
ಬಹುತೇಕ ಎಲ್ಲರೂ ಆರೋಗ್ಯವಾಗಿದ್ದು, ಕೆಲವರು ಆಸ್ಪತ್ರೆಯಿಂದ ಬಿಡುಗಡೆ ಹೊಂದಿ ತಾವು ವಾಸವಿರುವ ಟಿ.ಬಳ್ಳೆಕೆರೆ ಗ್ರಾಮಕ್ಕೆ ಬಂದಿದ್ದು, ಮಕ್ಕಳು ಮಾತ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.