ವರದಿ :ಪ್ರಭು ವಿ ಎಸ್
ಮದ್ದೂರು ಪುರಸಭೆ ವ್ಯಾಪ್ತಿಯ ಅನಧಿಕೃತ ಜಾಹೀರಾತುಗಳನ್ನು ಅಳವಡಿಸುವ ವ್ಯಕ್ತಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕ್ಕೆ ಸೂಚನೆ ನೀಡಿರುವುದಾಗಿ ಪುರಸಭಾ ಅಧ್ಯಕ್ಷ ಸುರೇಶ್ ಕುಮಾರ್ ತಿಳಿಸಿದರು.
ಮದ್ದೂರು ಪಟ್ಟಣದ ಪುರಸಭೆಯ ಎಸ್.ಎಂ.ಕೃಷ್ಣ ಸಭಾಂಗಣದಲ್ಲಿ ಇಂದು ಸುದ್ದಿಗೋಷ್ಟಿ ನಡೆಸಿ ಅವರು ಮಾತನಾಡಿದರು.
ಪಟ್ಟಣದ 23 ವಾರ್ಡ್ ಗಳ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಫ್ಲೆಕ್ಸ್, ಬ್ಯಾನರ್ ಗಳನ್ನು ಅಳವಡಿಸುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಇನ್ನು ಮುಂದೆ ಫ್ಲೆಕ್ಸ್ ಮತ್ತು ಬ್ಯಾನರ್ ಗಳನ್ನು ಅಳವಡಿಸು ವವರು ಇಲಾಖೆ ಅನುಮತಿ ಪಡೆದು ಮತ್ತು ಅಗತ್ಯ ದಾಖಲಾತಿಗಳನ್ನು ಕಚೇರಿಗೆ ತಲುಪಿಸುವ ಜೊತೆಗೆ ಶುಲ್ಕ ಪಾವತಿಸಿ ಅಳವಡಿಕೆಗೆ ಮುಂದಾಗುವಂತೆ ತಿಳಿಸಿದರು. ತಪ್ಪಿದಲ್ಲಿ ಅಂತಹ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ಕಸ ಹಾಕಿದರೆ ದಂಡ
ಎಲ್ಲಾ ವಾರ್ಡ್ ಗಳ ಮನೆಗಳಿಗೆ ತಲಾ 2 ಕಸ ಹಾಕುವ ಬಿನ್ ಗಳನ್ನು ವಿತರಿಸಲಾಗಿದ್ದು, ಸಾರ್ವಜನಿಕರು ಹಸಿ ಕಸ ಹಾಗೂ ಒಣಕಸಗಳನ್ನು ವಿಂಗಡಿಸಿ ಪ್ರತ್ಯೇಕವಾಗಿ ಕೊಡಬೇಕು, ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಕಸ ಹಾಕುವುದನ್ನು ತಡೆಗಟ್ಟಲು ಹಲವು ಕಡೆಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಯಾರಾದರು ರಸ್ತೆ ಬದಿಗಳಲ್ಲಿ ಕಸ ಹಾಕಿದರೆ 5000 ದವರೆಗೆ ದಂಡ ವಿಧಿಸಲಾಗುವುದು ಎಂದರು.
ಅಂಗಡಿಗಳಿಗೆ ನೋಟಿಸ್
ಪುರಸಭಾ ಮುಖ್ಯಾಧಿಕಾರಿ ಅಶೋಕ್ ಮಾತನಾಡಿ, ಪುರಸಭಾ ವ್ಯಾಪ್ತಿಯಲ್ಲಿ 1.5 ಕೋಟಿ ಮನೆ ಕಂದಾಯ ಹಾಗೂ 2.25 ಕೋಟಿ ನೀರಿನ ಕಂದಾಯ ಬಾಕಿ ಇದ್ದು, ಜನರು ಪಾವತಿ ಮಾಡಬೇಕು. ಪಟ್ಟಣದ 41 ಅಂಗಡಿ ಮಳಿಗೆಗಳಿಂದ 76 ಲಕ್ಷ ರೂ. ಬಾಕಿ ಶುಲ್ಕ ಬರಬೇಕಿದ್ದು, ಈಗಾಗಲೇ ಬಾಡಿಗೆದಾರರಿಗೆ ನೋಟಿಸ್ ಜಾರಿ ಮಾಡಿ ಮಾ.31 ರ ಒಳಗೆ ಕಡ್ಡಾಯವಾಗಿ ಹಣ ಪಾವತಿಸಬೇಕು,ತಪ್ಪಿದಲ್ಲಿ ಠೇವಣಿ ಮುಟ್ಟುಗೋಲು ಹಾಕುವ ಜೊತೆಗೆ ಸ್ಥಿರ ಮತ್ತು ಚರಾಸ್ತಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಹೇಳಿದರು.
ಸರ್ಕಾರ ಮತ್ತು ಜಿಲ್ಲಾಧಿಕಾರಿಗಳ ಆದೇಶದಂತೆ ಕಡ್ಡಾಯವಾಗಿ ಬಾಕಿ ಉಳಿಸಿಕೊಂಡಿರುವವರು ಹಣವನ್ನು ಮಾ.31ರ ಒಳಗೆ ಕಡ್ಡಾಯವಾಗಿ ಪಾವತಿಸಿ ಇಲಾಖೆಯೊಂದಿಗೆ ಸಹಕರಿಸಬೇಕೆಂದು ಕೋರಿದರು.
ಸುದ್ದಿಗೋಷ್ಠಿಯಲ್ಲಿ ಪರಿಸರ ಅಭಿಯಂತರ ನಾಗೇಂದ್ರ ಗಾಂವ್ಕರ್,ಸ್ಥಾಯಿ ಸಮಿತಿ ಅಧ್ಯಕ್ಷ ಟಿ .ಆರ್ ಪ್ರಸನ್ನ ಕುಮಾರ್,ಸತೀಶ್ ರಾಜ್, ಮ.ನ.ಪ್ರಸನ್ನ ಕುಮಾರ್ ಹಾಜರಿದ್ದರು.