ಮಂಡ್ಯ ನಗರದ ಸಬ್ ರಿಜಿಸ್ಟ್ರಾರ್ ಕಚೇರಿ ಬಳಿ ಇರುವ ಶ್ರೀ ಸುಬ್ರಹ್ಮಣ್ಯ ಸನ್ನಿಧಿಯಲ್ಲಿ ಸುಬ್ರಮಣ್ಯ ಷಷ್ಠಿ ಜಾತ್ರಾ ಮಹೋತ್ಸವ ಸಹಸ್ರಾರು ಭಕ್ತಾದಿಗಳ ಉದ್ಘೋಷದ ನಡುವೆ ಬಹಳ ವಿಜೃಂಭಣೆಯಿಂದ ನೆರವೇರಿತು.
ಸುಬ್ರಹ್ಮಣ್ಯ ಸ್ವಾಮಿಗೆ ಬೆಳ್ಳಿ ಆಭರಣ ಧಾರಣೆ ಮಾಡಿ ವಿವಿಧ ಬಗೆಯ ಹೂವುಗಳಿಂದ ಅಲಂಕರಿಸಲಾಗಿತ್ತು. ಜಿಲ್ಲಾಧಿಕಾರಿ ಕಚೇರಿಯ ಎರಡೂ ರಸ್ತೆಗಳಲ್ಲಿ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು.
ಸುಬ್ರಮಣ್ಯ ಷಷ್ಠಿ ಅಂಗವಾಗಿ ಸೋಮವಾರ ಮತ್ತು ಇಂದು ಎರಡೂ ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು. ಉಡುಪಿಯ ವೀರಭದ್ರೇಶ್ವರ ಸ್ವಾಮಿ ದೇವಸ್ಥಾನದ ಅರ್ಚಕ ವೇದಬ್ರಹ್ಮ ಶಂಕರನಾರಾಯಣ ಅಡಿಗ ಭಟ್ ಮತ್ತು ಸಂಗಡಿಗರು ಸೋಮವಾರ ಸಂಜೆ ಗಣಯಾಗ, ನವಗ್ರಹ ಹೋಮ, ಮೃತ್ಯುಂಜಯ ಹೋಮ, ಸುಬ್ರಮಣ್ಯ ಹೋಮ ಹಾಗೂ ನಾಗ ತನು ತರ್ಪಣಾ ಪೂಜೆ ಮಾಡಿದರು.
ಇಂದು ಬೆಳಿಗ್ಗೆ ಮಹಾ ಚಂಡಿಕಾ ಯಾಗ, ಆಶ್ಲೇಷ ಬಲಿ ಪೂಜೆ ಮಾಡಿ ಮಹಾಮಂಗಳಾರತಿ ಮಾಡಲಾಯಿತು. ಇಂದು ಬೆಳಿಗ್ಗೆಯಿಂದಲೇ ಹತ್ತು ಸಾವಿರಕ್ಕೂ ಹೆಚ್ಚು ಜನರು ಸುಬ್ರಹ್ಮಣ್ಯ ಸ್ವಾಮಿಯ ದರ್ಶನ ಪಡೆದರು.
ಸುಮಾರು ಹದಿನೈದು ಸಾವಿರಕ್ಕೂ ಹೆಚ್ಚು ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಮಾಡಲಾಯಿತು. ಲಾಡು, ತರಕಾರಿ ಬಾತ್, ತಗಣಿ ಕಾಳಿನ ಕೂಟು, ಮೊಸರನ್ನ ಬಡಿಸಲಾಯಿತು.
ಇದನ್ನೂ ಓದಿ:ಶ್ರದ್ಧಾ ಭಕ್ತಿಯಿಂದ ನಡೆದ ಶ್ರೀ ಆದಿಷ್ಠ ಸುಬ್ರಹ್ಮಣ್ಯ ಷಷ್ಠಿ ಮಹೋತ್ಸವ
ಮಂಡ್ಯ ನಗರಸಭೆಯ ಮಾಜಿ ಸದಸ್ಯ ಎಂ.ಜೆ.ಚಿಕ್ಕಣ್ಣ ನೇತೃತ್ವದಲ್ಲಿ ಕಟ್ಟೆ ಗೆಳೆಯರ ಬಳಗದ ಹಲವಾರು ಸದಸ್ಯರು ಸುಮಾರು 12 ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಸುಬ್ರಹ್ಮಣ್ಯ ಷಷ್ಠಿ ಮಹೋತ್ಸವ ವರ್ಷಗಳುರುಳಿದಂತೆ ಬಹಳ ವಿಜೃಂಭಣೆಯಿಂದ ನಡೆಯುತ್ತಿದೆ. ಭಕ್ತಾದಿಗಳೇ ಸ್ವಯಂ ಪ್ರೇರಿತರಾಗಿ ಅನ್ನ ಸಂತರ್ಪಣೆ, ದೇವಸ್ಥಾನದ ಅಲಂಕಾರ ಮೊದಲಾದ ಕಾರ್ಯಕ್ರಮಗಳಿಗೆ ಧನ ಸಹಾಯ ಸೇರಿದಂತೆ ಎಲ್ಲಾ ಅಗತ್ಯ ಸೇವೆಗಳನ್ನು ಮಾಡಿಕೊಡುತ್ತಾರೆ. ಪ್ರತಿ ವರ್ಷ ಇಲ್ಲಿಗೆ ಬರುವ ಭಕ್ತಾದಿಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ.