ಬಿಜೆಪಿ ಪಕ್ಷ ಬಡವರಿಗಾಗಿ ಒಂದೇ ಒಂದು ಮನೆ ಕಟ್ಟಿಸಿ ಕೊಟ್ಟಿಲ್ಲ. ಬಡಜನರ ವಿರೋಧಿ ಬಿಜೆಪಿ ಸರ್ಕಾರವನ್ನ ಅಧಿಕಾರಕ್ಕೆ ಬರದಂತೆ ಕಿತ್ತೊಗೆಯಬೇಕು ಎಂದು ಮಾಜಿ ಮುಖ್ಯ ಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾ ಮಯ್ಯ ಬಿಜೆಪಿ ವಿರುದ್ಧ ಕಿಡಿಕಾರಿದರು.
ಕೆ.ಆರ್.ಪೇಟೆ ಪಟ್ಟಣದ ಪುರಸಭೆ ಪಕ್ಕದ ಮೈದಾನದಲ್ಲಿ ರಾಜ್ಯ ಕುರುಬರ ಸಂಘ, ಜಿಲ್ಲಾ ಮತ್ತು ತಾಲೂಕು ಕುರುಬರ ಸಂಘಗಳು ಸಂಯುಕ್ತ ವಾಗಿ ಆಯೋಜಿಸಿದ್ದ 535 ನೇ ಕನಕ ಜಯಂತಿ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಬಿಜೆಪಿಯವರ ಮನೆ ಹಾಳಾಗ,ಬಡವರಿಗೆ ಇವರು ಒಂದೇ ಒಂದು ಮನೆಯನ್ನೂ ಕಟ್ಟಿಸಿಕೊಡಲಿಲ್ಲ.
ಬಿಜೆಪಿ ಪಕ್ಷಕ್ಕೆ ಬಡಜನರೆಂದರೆ ಅಸಡ್ಡೆ. ಬಿಜೆಪಿ ನಾಯಕರ ಗಮನ ಏನಿದ್ದರೂ ಭ್ರಷ್ಟಾಚಾರ ಮಾಡೋದು.ಬಡವರಿಗೆ ಒಂದು ಮನೆಯನ್ನು ನೀಡದ ಭ್ರಷ್ಟ ಬಿಜೆಪಿಯನ್ನು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸೋಲಿಸಿ,ಸದಾ ಬಡಜನರು,ಸಾಮಾನ್ಯ ಜನರ ಪರವಾಗಿರುವ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ತರಬೇಕೆಂದರು.
ನಾನು ಸಿಎಂ ಆಗಿದ್ದಾಗ ನಾಡಿನ ಬಡವರಿಗಾಗಿ 15 ಲಕ್ಷ ಮನೆಗಳನ್ನು ಕಟ್ಟಿಸಿಕೊಟ್ಟಿದ್ದೆ. ಬಡವರ ಹೊಟ್ಟೆ ತುಂಬಿಸಲು ಕಡಿಮೆ ದರದಲ್ಲಿ ಊಟ ತಿಂಡಿ ನೀಡುವ ಇಂದಿರಾ ಕ್ಯಾಂಟೀನ್ ಆರಂಭಿಸಿದ್ದೆ. ಶೋಷಿತರ ಮಕ್ಕಳ ಶಿಕ್ಷಣಕ್ಕಾಗಿ ಪ್ರತಿ ತಿಂಗಳು 1500 ರೂ. ಶಿಷ್ಯ ವೇತನ ನೀಡುತ್ತಿದ್ದೆ.
ಬಡವರ ಹೊಟ್ಟೆ ತುಂಬಿಸಲು ಪ್ರತಿ ಕುಟುಂಬಕ್ಕೂ ತಲಾ 7 ಕೆ.ಜಿ. ಉಚಿತ ಅಕ್ಕಿ ನೀಡುವ ಅನ್ನಭಾಗ್ಯ ಯೋಜನೆ ರೂಪಿಸಿದ್ದೆ. ನಾನು ಅಧಿಕಾರ ಕಳೆದುಕೊಂಡ ಅನಂತರ ಬಡವರ ಪರವಾದ ಎಲ್ಲಾ ಯೋಜನೆಗಳನ್ನೂ ಬಿಜೆಪಿ ಸರ್ಕಾರ ನಿಲ್ಲಿಸಿದೆ. ವಿದ್ಯಾಸಿರಿ ಕೊಟ್ಟೆ, ಬಿಜೆಪಿಯವರು ನಿಲ್ಲಿಸಿದ್ರು.
ಇಂದಿರಾ ಕ್ಯಾಂಟೀನ್ ಸಹ ನಿಲ್ಲಿಸಿದ್ದಾರೆ.ನಾನು ನೀಡುತ್ತಿದ್ದ 7 ಕೆ.ಜಿ ಅಕ್ಕಿಯನ್ನು 5 ಕೆ.ಜಿ ಗೆ ಇಳಿಸಿದೆ. ನಾನು ಮತ್ತೆ ಅಧಿಕಾರಕ್ಕೆ ಬಂದರೆ ಪ್ರತಿ ಕುಟುಂಬಕ್ಕೂ ತಲಾ 10 ಕೆ.ಜಿ.ಅಕ್ಕಿ ನೀಡುತ್ತೇನೆ ಎಂದು ಸಿದ್ದರಾಮಯ್ಯ ಘೋಷಿಸಿದರು.
ನಾನು ಹೋದಲೆಲ್ಲಾ ನೀವು ಪ್ರೀತಿ, ಅಭಿಮಾನ ತೋರಿಸುತ್ತೀರಿ. ನಿಮ್ಮ ಪ್ರೀತಿ ಮತ್ತು ಅಭಿಮಾನಗಳು ಮತವಾಗಿ ಪರಿವರ್ತನೆಯಾದರೆ ಮಾತ್ರ ನನಗೆ ಜಿಲ್ಲೆಯಲ್ಲಿ ಶಕ್ತಿ ಬರುತ್ತದೆ. ಬಿಜೆಪಿ ಗೆದ್ದರೆ ಬಸವರಾಜ ಬೊಮ್ಮಾಯಿಗೆ, ಜೆಡಿಎಸ್ ಗೆದ್ದರೆ ಹೆಚ್.ಡಿ.ಕುಮಾ ರಸ್ವಾಮಿಗೆ ಶಕ್ತಿ ಬರುತ್ತದೆ. ಇದನ್ನು ಅರ್ಥಮಾಡಿಕೊಂಡು ಇಲ್ಲಿನ ಜನತೆ ಮುಂದಿನ ಚುನಾವಣೆಯಲ್ಲಿ ನಾನು ಹೇಳಿದ ಅಭ್ಯರ್ಥಿಗಳಿಗೆ ಮತ ಹಾಕಿ ಗೆಲ್ಲಿಸಬೇಕೆಂದರು.
ಮಾಜಿ ಸಚಿವರಾದ ಹೆಚ್.ಎಂ.ರೇವಣ್ಣ, ಹೆಚ್.ಸಿ.ಮಹದೇವಪ್ಪ, ಎನ್.ಚಲುವರಾಯಸ್ವಾಮಿ, ಪಿ.ಎಂ.ನರೇಂದ್ರಸ್ವಾಮಿ, ಶಾಸಕ ಭೈರತಿ ಸುರೇಶ್, ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್, ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ದಡದಪುರ ಶಿವಣ್ಣ, ಕಾಂಗ್ರೆಸ್ ಮುಖಂಡರಾದ ವಿಜಯ್ ರಾಮೇಗೌಡ, ಆರ್.ಟಿ.ಓ ಅಧಿಕಾರಿ ಮಲ್ಲಿಕಾರ್ಜುನ್ ಸೇರಿದಂತೆ ಹಲವರಿದ್ದರು.