ಕೌಟುಂಬಿಕ ಕಲಹದಿಂದ ತನ್ನ ಮೂವರು ಮಕ್ಕಳಿಗೆ ವಿಷವುಣಿಸಿ ಆತ್ಮಹತ್ಯೆ ಮಾಡಿಕೊಂಡ ಮದ್ದೂರು ಪಟ್ಟಣದ ಉಸ್ಮಾ ಕೌಸರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅನುಮಾನ ವ್ಯಕ್ತಪಡಿಸಿರುವ ಆಕೆಯ ತಾಯಿ, ಪೊಲೀಸರಿಗೆ ದೂರು ನೀಡಿದ್ದಾರೆ. ಸದ್ಯಕ್ಕೆ ಶವಗಳ ಮರಣೋತ್ತರ ಪರೀಕ್ಷೆ ನಡೆಯುತ್ತಿದ್ದು, ಇದರ ವರದಿ ಬಂದ ನಂತರ ತನಿಖೆ ಕೈಗೆತ್ತಿಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್ ತಿಳಿಸಿದರು.
ಶವಗಳನ್ನು ಮಂಡ್ಯ ಮಿಮ್ಸ್ ಅಸ್ಪತ್ರೆ ಮರಣೋತ್ತರ ಪರೀಕ್ಷೆ ತಂದಿದ್ದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಎಸ್ಪಿ ಎನ್.ಯತೀಶ್ ಅವರು, ಉಸ್ಮಾ ಕೌಸರ್ ಅವರ ತಾಯಿ ಈ ಸಂಬಂಧ ಪೊಲೀಸರಿಗೆ ದೂರು ನೀಡಿದ್ದಾರೆ. ಅವರು ಕುಟುಂಬ ಕಲಹದಿಂದ ಈ ದುರ್ಘಟನೆ ಸಂಭವಿಸಿದೆ ಎಂದು ತಿಳಿಸಿದ್ದಾರೆ. ಅದರ ಆಧಾರದ ಮೇಲೆ ಉಸ್ಮಾ ಕೌಸರ್ ಅವರ ಪತಿ ಆಖಿಲ್ ಅಹಮದ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುವುದು ಎಂದರು.
ಈ ಪ್ರಕರಣವು ಮೇಲ್ನೋಟಕ್ಕೆ ಕೌಟುಂಬಿಕ ಕಲಹದಿಂದ ನಡೆದಿದೆ ಎಂದು ತಿಳಿದು ಬರುತ್ತಿದೆ, ಆದರೆ ತನಿಖೆಯ ನಂತರ ಹೇಗಾಯ್ತು ? ಏಕಾಯ್ತು ? ಎಂಬ ಸತ್ಯಾಂಶ ತಿಳಿದು ಬರಲಿದೆ. ಆತ್ಮಹತ್ಯೆ ಮಾಡಿಕೊಂಡ ಮಹಿಳೆ ಡೆತ್ ನೋಟನ್ನೇನ್ನೂ ಬರೆದಿಟ್ಟಿಲ್ಲ, ಅವರ ಕುಟುಂಬದವರ ದೂರು ದಾಖಲಾಗಿರುವುದರಿಂದ ಈ ಆಧಾರದ ಮೇಲೆ ತನಿಖೆ ನಡೆಯಲಿದೆ ಎಂದು ಸ್ಪಷ್ಟಪಡಿಸಿದರು.