ಮಂಡ್ಯ ಜಿಲ್ಲೆಯಲ್ಲಿ ಹಲವು ಜಾನಪದ ಕಲೆಗಳು ಜೀವಂತವಾಗಿದ್ದು, ಜಾನಪದ ಕಲೆಗೆ ಜಿಲ್ಲೆಯ ಕೊಡುಗೆ ದೊಡ್ಡದು ಎಂದು ಜಿಲ್ಲಾ ಉಸ್ತುವಾರಿ ಮತ್ತು ಅಬಕಾರಿ ಸಚಿವ ಕೆ.ಗೋಪಾಲಯ್ಯ ಅಭಿಪ್ರಾಯ ವ್ಯಕ್ತಪಡಿಸಿದರು.
ಮಂಡ್ಯನಗರದ ಜಿಲ್ಲಾ ಪಂಚಾಯತ್ ಕಾವೇರಿ ಸಭಾಂಗಣದಲ್ಲಿ ಅಖಿಲ ಕರ್ನಾಟಕ ಜಾನಪದ ಸಮ್ಮೇಳನದ ಆಹ್ವಾನ ಪತ್ರಿಕೆ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಡಿ.9 ಮತ್ತು10ರಂದು ಎರಡು ದಿನಗಳ ಕಾಲ ಅಖಿಲ ಕರ್ನಾಟಕ ಜಾನಪದ ಸಮ್ಮೇಳನ ಮಂಡ್ಯದಲ್ಲಿ ನಡೆಯುತ್ತಿದೆ. ಬಹಳ ವರ್ಷಗಳ ನಂತರ ಸಮ್ಮೇಳನ ನಡೆಯುತ್ತಿದ್ದು, ಸಮ್ಮೇಳನದ ಯಶಸ್ವಿಗೆ ಜಿಲ್ಲಾಡಳಿತ ಮತ್ತು ಸರ್ಕಾರ ಎಲ್ಲಾ ರೀತಿಯ ನೆರವು ನೀಡಿದೆ. ಜಾನಪದ ಸಮ್ಮೇಳನದಿಂದ ಜಿಲ್ಲೆಗೆ ಗೌರವ ದೊರೆಯಲಿದೆ ಎಂದರು.
ಜಾನಪದ ಕಲೆಗೆ ಜಿಲ್ಲೆಯಲ್ಲಿ ವಿಶಿಷ್ಟ ಸ್ಥಾನಮಾನ ದೊರಕಿದೆ. ಮಂಡ್ಯ ಜಿಲ್ಲೆಗೆ ಕವಿಗಳು, ರಾಜಕಾರಣಿಗಳ ಕೊಡುಗೆ ಸಾಕಷ್ಟಿದೆ. ಚುಂಚಶ್ರೀಗಳ ಹಾರೈಕೆಯಂತೆ ಜಾನಪದ ಕಲೆ ಶಾಶ್ವತವಾಗಿ ಉಳಿಯಲು ನಮ್ಮ ಸರ್ಕಾರ ಎಲ್ಲಾ ರೀತಿಯ ನೆರವು ನೀಡಲಿದೆ. ಪ್ರತಿ ವರ್ಷ ಜಾನಪದ ಸಮ್ಮೇಳನ ನಡೆಸಲು ತೀರ್ಮಾನಿಸಲಾಗಿದ್ದು, ಮುಂದಿನ ವರ್ಷದ ಆಚರಣೆಯ ದಿನಾಂಕವನ್ನು ಸಮ್ಮೇಳನದಲ್ಲಿ ತೀರ್ಮಾನಿಸಲಾಗುವುದು ಎಂದರು.
ಶಾಸಕ ಎಂ.ಶ್ರೀನಿವಾಸ್ ಮಾತನಾಡಿ, ಜಿಲ್ಲೆಯಲ್ಲಿ ನಡೆದಿರುವ ಎಲ್ಲಾ ಸಮ್ಮೇಳನಗಳು ಯಶಸ್ವಿಯಾಗಿವೆ. ಅದರಂತೆ ಜಾನಪದ ಸಮ್ಮೇಳನವು ಯಶಸ್ವಿಯಾಗಲಿದೆ. ಜಿಲ್ಲೆಯ ಕೀರ್ತಿಯನ್ನು ದೊಡ್ಡ ಮಟ್ಟದಲ್ಲಿ ಎತ್ತಿ ಹಿಡಿಯಲು ನಾವೆಲ್ಲರೂ ಶ್ರಮಿಸೋಣ ಎಂದರು.
ಕಾರ್ಯದರ್ಶಿ ಜಯರಾಮ್ ರಾಯಪುರ ಮಾತನಾಡಿ, ಮಂಡ್ಯ ಜಿಲ್ಲೆ ಜಾನಪದ ಕಲೆಗಳ ಕೇಂದ್ರ ಸ್ಥಾನ. ಪ್ರಾತಿನಿಧಿಕವಾಗಿ ಎಲ್ಲಾ ಜಿಲ್ಲೆಗಳಿಂದ ಜಾನಪದ ತಂಡಗಳು ಸಮ್ಮೇಳನದಲ್ಲಿ ಭಾಗಿಯಾಗಬೇಕು ಬಹಳ ವರ್ಷಗಳ ನಂತರ ಜಾನಪದ ಸಮ್ಮೇಳನ ನಡೆಯುತ್ತಿದ್ದು, ಜಿಲ್ಲೆಯ ಜನರು ಸ್ವಯಂ ಪ್ರೇರಣೆಯಿಂದ ಸಮ್ಮೇಳನದಲ್ಲಿ ಭಾಗವಹಿಸಿ ಯಶಸ್ವಿಗೆ ಕಾರಣವಾಗುವ ಮೂಲಕ ಜಾನಪದ ಕಲೆ ಉಳಿಸಲು ಮುಂದಾಗಬೇಕು ಎಂದರು.
ಜಿಲ್ಲಾಧಿಕಾರಿ ಡಾ.ಎಚ್.ಎನ್.ಗೋಪಾಲಕೃಷ್ಣ, ಅಪರ ಜಿಲ್ಲಾಧಿಕಾರಿ ಜಿಲ್ಲಾಧಿಕಾರಿ ಡಾ.ಎಚ್.ಎಲ್. ನಾಗರಾಜು, ಜಾನಪದ ವಿದ್ವಾಂಸ ಹಿ.ಶಿ.ರಾಮಚಂದ್ರೇಗೌಡ, ಕೀಲಾರ ಕೃಷ್ಣೇಗೌಡ ಉಪಸ್ಥಿತರಿದ್ದರು.