ಕರ್ನಾಟಕ ಸಂಘ, ಜನದನಿ ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ಡಿ.7ರಂದು ಸಂಜೆ 4 ಗಂಟೆಗೆ ಮಂಡ್ಯನಗರದ ಕರ್ನಾಟಕ ಸಂಘದ ಆವರಣದಲ್ಲಿ 25ನೇ ವರ್ಷದ ದೇವಮ್ಮ ಇಂಡುವಾಳು ಎಚ್.ಹೊನ್ನಯ್ಯ, ಇಂಡುವಾಳು ಎಚ್.ಹೊನ್ನಯ್ಯ ಸಮಾಜ ಸೇವಾ ಪ್ರಶಸ್ತಿ ಹಾಗೂ ಎಚ್.ಶಾರದಮ್ಮ ಮತ್ತು ಕೆಂಪಯ್ಯ ವಿದ್ಯಾರ್ಥಿ ಪುರಸ್ಕಾರ ಪ್ರದಾನ ಸಮಾರಂಭ ನಡೆಯಲಿದೆ ಎಂದು ಕರ್ನಾಟಕ ಸಂಘದ ಕಾರ್ಯಾಧ್ಯಕ್ಷ ತಗ್ಗಹಳ್ಳಿ ವೆಂಕಟೇಶ್ ತಿಳಿಸಿದರು.
ಮಂಡ್ಯದಲ್ಲಿ ಮಾತನಾಡಿದ ಅವರು, ಈ ಬಾರಿಯ ಇಂಡುವಾಳು ಎಚ್.ಹೊನ್ನಯ್ಯ ಸಮಾಜ ಸೇವಾ ಪ್ರಶಸ್ತಿ ಯನ್ನು ಮಾಜಿ ಶಾಸಕ ಮೈಸೂರಿನ ಡಿ.ಮೌದೇಗೌಡ ಅವರಿಗೆ ಹಾಗೂ ದೇವಮ್ಮ ಇಂಡುವಾಳು ಎಚ್.ಹೊನ್ನಯ್ಯ ಸಮಾಜ ಸೇವಾ ಪ್ರಶಸ್ತಿ ಟಿ.ಎಂ.ಹೊಸೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತಾತ್ಮಕ ವೈದ್ಯಾಧಿಕಾರಿ ಡಾ.ತಾರಾ ಟಿ.ಜೆ. ಅವರಿಗೆ ಪ್ರದಾನ ಮಾಡಲಾಗುತ್ತಿದೆ ಎಂದರು.
ಅಂದಿನ ಸಮಾರಂಭದ ದಿವ್ಯಸಾನಿಧ್ಯವನ್ನು ಡಾ.ಶ್ರೀನಿರ್ಮಲಾನಂದನಾಥ ಮಹಾಸ್ವಾಮೀಜಿ, ಶ್ರೀಪುರುಷೋತ್ತಮಾನಂದನಾಥ ಸ್ವಾಮೀಜಿ ವಹಿಸುವರು. ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಪ್ರಶಸ್ತಿ ಪ್ರದಾನ ಮಾಡುವರು. ಶಾಸಕ ಎಂ.ಶ್ರೀನಿವಾಸ್ ಅಧ್ಯಕ್ಷತೆ ವಹಿಸುವರು. ಶಾಸಕ ಮಧು ಜಿ.ಮಾದೇಗೌಡ ‘ಬಯಲು ಸಿಂಹ’ ಕೃತಿ ಬಿಡುಗಡೆ ಮಾಡುವರು. ಮಾಜಿ ಶಾಸಕ ಕೆ.ಟಿ.ಶ್ರೀಕಂಠೇಗೌಡ ಅಭಿನಂದನಾ ನುಡಿ ನುಡಿಯುವರು. ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಬಿ.ರಾಮಕೃಷ್ಣ, ಬಯಲುಸಿಂಹ ಕೃತಿಯ ಕರ್ತೃ ಡಾ.ಹೆಚ್.ಎಸ್.ಮುದ್ದೇಗೌಡ, ಡಾ.ಹೆಚ್.ಸಿದ್ದಪ್ಪ ಉಪಸ್ಥಿತರಿರುವರು ಎಂದರು.
ವಿದ್ಯಾರ್ಥಿ ಪುರಸ್ಕಾರಕ್ಕೆ ಆಯ್ಕೆಯಾದ ಇಂಡುವಾಳು ಪ್ರೌಢಶಾಲೆಯ ಸ್ನೇಹ, ಪೂರ್ಣೇಶ ಎಂ.ವಿ., ಕೊತ್ತತ್ತಿ ವಿದ್ಯಾಗಣಪತಿ ಪ್ರೌಢಶಾಲೆಯ ಕಾರ್ತಿಕ್ ಬಿ., ವಿಸ್ಮಿತಾ ಬಿ.ಎಸ್. ಅವರಿಗೆ ತಲಾ 5 ಸಾವಿರ ರೂ. ನಗದು ಹಾಗೂ ಫಲಕಗಳೊಂದಿಗೆ ಸನ್ಮಾನಿಸಲಾಗುವುದು ಎಂದರು.
ಗೋಷ್ಠಿಯಲ್ಲಿ ಹೆಚ್.ಹೊನ್ನಪ್ಪ, ಸೋಮಶೇಖರ್, ಮೋಹನ್ ಉಪಸ್ಥಿತರಿದ್ದರು.