ಮುಂಬರುವ ಸಂಕ್ರಾಂತಿ ನಂತರ ಮುಖ್ಯ ಪ್ರಾಣದೇವರು ಅಯೋಧ್ಯೆ ಶ್ರೀರಾಮಮಂದಿರದಲ್ಲಿ ಪ್ರತಿಷ್ಠಾಪನೆ ಆಗಲಿದೆ ಎಂದು ಉಡುಪಿ ಶ್ರೀಪ್ರಸನ್ನತೀರ್ಥ ಪೇಜಾವರಶ್ರೀ ತಿಳಿಸಿದರು
ಮದ್ದೂರು ಪಟ್ಟಣದ ಇತಿಹಾಸ ಪ್ರಸಿದ್ಧ ಶ್ರೀಹೊಳೆ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಇಂದು ಹನುಮಾನ್ ವ್ರತ ಪ್ರಯುಕ್ತ ವಿಶೇಷ ಪೂಜೆ ನಡೆಯುತ್ತಿತ್ತು, ದೇವರಿಗೆ ವಿಶೇಷ ಹೂವಿನ ಅಲಂಕಾರ ವಿತರಣೆ ನಡೆಯುವ ಸಂದರ್ಭದಲ್ಲಿ ಉಡುಪಿ ಮಠದ ಶ್ರೀ ಪ್ರಸನ್ನ ತೀರ್ಥ ಸ್ವಾಮೀಜಿಗಳು ಆಂಜನೇಯ ಸ್ವಾಮಿಗೆ ಮಹಾ ಮಂಗಳಾರತಿ ನೆರವೇರಿಸಿ ಮಂತ್ರಾಕ್ಷತೆಗಳನ್ನ ಭಕ್ತಾದಿಗಳಿಗೆ ನೀಡಿ ಆಶೀರ್ವದಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಪೇಜಾವರಶ್ರೀ, ಉಡುಪಿಯಲ್ಲಿ ಮುಸ್ಲಿಂ ಬಾಂಧವರಿಂದ ವ್ಯಾಪಾರ ನಿಷೇಧ ಮಾಡಲಾಗುತ್ತದೆಯೇ ? ಎಂಬ ಪ್ರಶ್ನೆಗೆ ಸದ್ಯಕ್ಕೆ ಆ ಪರಿಸ್ಥಿತಿ ಉಡುಪಿಯಲ್ಲಿ ಎದುರಾಗಿಲ್ಲ, ಮುಂದೆ ಆ ದಿನಗಳು ಬರುತ್ತದೇಯೆ ನನಗೆ ತಿಳಿದಿಲ್ಲ, ಅದರ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದರು.
ಶ್ರೀರಂಗಪಟ್ಟಣ ಹನುಮಾನ್ ಮಾಲೆಯಲ್ಲಿ ಮಸೀದಿ ಧ್ವಂಸ ಮಾಡಲು ಮುಂದಾಗಿದ್ದ ಕಾರ್ಯಕರ್ತರ ಬಗ್ಗೆ ಏನ್ ಹೇಳುತ್ತೀರಿ ಎಂಬ ಪ್ರಶ್ನೆಗೆ ಆ ವಿಚಾರವೇ ನನಗೆ ತಿಳಿದಿಲ್ಲ. ಅಯೋಧ್ಯೆ ರಾಮಮಂದಿರದ ಕೆಲಸಗಳು ವೇಗವಾಗಿ ನಡೆಯುತ್ತಿದ್ದು, ಜನವರಿ ಸಂಕ್ರಾಂತಿಯ ನಂತರ 24 ದಿನದಂದು ಮುಖ್ಯಪ್ರಾಣ ದೇವರಿಗೆ ಪ್ರತಿಷ್ಠಾಪನೆ ನಡೆಯಲಿದೆ ಎಂದರು.
ಈ ಸಂದರ್ಭದಲ್ಲಿ ಪ್ರಧಾನ ಅರ್ಚಕರಾದ ಪ್ರದೀಪ ಆಚಾರ್ಯ, ಸುರೇಶ್ ಆಚಾರ್ಯ, ಮನ್ಮುಲ್ ನಿರ್ದೇಶಕಿ ರೂಪಾ, ಮಂಜುನಾಥ್, ಸತೀಶ್, ನಂಜು ಸೇರಿದಂತೆ ಹಲವರು ಉಪಸ್ಥಿತರಿದ್ದರು.