ವರದಿ : ಪ್ರಭು ವಿ ಎಸ್
ಸುಮಲತಾ ಅವರಿಗೆ ಒಳ್ಳೆಯ ಹೆಸರಿದೆ, ಹೀಗಾಗಿ ಅವರನ್ನ ಪಕ್ಷಕ್ಕೆ ಮುಕ್ತವಾಗಿ ಕರೆದಿದ್ದೇವೆ ಎಂದು ಉನ್ನತ ಶಿಕ್ಷಣ ಸಚಿವ ಸಿ.ಎಸ್.ಅಶ್ವತ್ ನಾರಾಯಣ ಅವರು ಹೇಳುವ ಮೂಲಕ ಸಂಸದೆ ಸುಮಲತಾ ಬಿಜೆಪಿಗೆ ಸೇರುತ್ತಾರೆ ಎಂಬ ಸುಳಿವು ನೀಡಿದರು.
ಮದ್ದೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸೇರಲು ಅವರು ಸೂಕ್ತ ಕಾಲದಲ್ಲಿ ನಿರ್ಧಾರ ಮಾಡಲಿದ್ದಾರೆ. ಸುಮಲತಾ ಸ್ವತಂತ್ರವಾಗಿ ಆಯ್ಕೆ ಆಗಿದ್ದಾರೆ. ಪಕ್ಷಕ್ಕೆ ಬರಲು ಅವರಿಗೆ ಕಾನೂನಿ ನಿಬಂಧನೆಗಳಿರುತ್ತವೆ. ಕಾದು ನೋಡೋಣ ಅವರ ಇಚ್ಚೆ, ಅವರ ಆಸಕ್ತಿ. ಸುಮಲತಾ ಪಕ್ಷಕ್ಕೆ ಬಂದಾಗ ಅವರು ಎಲ್ಲಿ ಸ್ಪರ್ಧೆ ಮಾಡಬೇಕು ಅನ್ನೋದನ್ನ ಕಾದು ನೋಡೋಣ ಎಂದರು.
ವಿಶ್ವನಾಥ್ ಬಿಜೆಪಿಯಲ್ಲೇ ಇದ್ದಾರೆ
ಹಳ್ಳಿಹಕ್ಕಿ ಹೆಚ್.ವಿಶ್ವನಾಥ್ ಮತ್ತು ಸಿದ್ದರಾಮಯ್ಯ ಭೇಟಿ ವಿಚಾರದ ಬಗ್ಗೆ ಪ್ರತಿಕ್ರಿಸಿದ ಅವರು, ಸಿದ್ದರಾಮಯ್ಯ, ವಿಶ್ವನಾಥ ಅವರ ನಡುವೆ ವ್ಯತ್ಯಾಸವಿದೆ. ಸಿದ್ದರಾಮಯ್ಯ ಹಾಗೂ ವಿಶ್ವನಾಥ್ ಅವರ ವೈಯಕ್ತಿಕ ಸಂಬಂಧಗಳು ಏನು ಅಂತ ಗೊತ್ತಿಲ್ಲ. ಅವರ ನಡುವೆ ವ್ಯತ್ಯಾಸಗಳಿತ್ತು. ವಿಶ್ವನಾಥ್ ಅವರು ಕಾಂಗ್ರೆಸ್ ತೊರೆದು ಜೆಡಿಎಸ್ ಗೆ ಹೋಗಿದ್ರು. ಈಗ ಬಿಜೆಪಿಗೆ ಆಗಮಿಸಿದ್ರು. ಈಗ ನಮ್ಮ ನಾಯಕರಾಗಿ ನಮ್ಮ ಪಕ್ಷದಲ್ಲಿದ್ದಾರೆ. ಸಮಯ, ಸಂದರ್ಭ ಬಂದಾಗ ಸಮಾಜಿಕವಾಗಿ ನಿಂತು ಮಾತನಾಡಿದ್ದಾರೆ. ಅದಕ್ಕೆ ಹೆಚ್ಚಿನ ರಾಜಕೀಯ ಬಣ್ಣ ಕೊಡೋದು ಬೇಡ. ಅವರು ಕಾಂಗ್ರೆಸ್ ಪಕ್ಷ ಸೇರುವ ಬಗ್ಗೆ ನನಗೆ ಗೊತ್ತಿಲ್ಲ. ಈಗ ಅವರು ನಮ್ಮ ಪಕ್ಷದಲ್ಲಿದ್ದಾರೆ ಎಂದರು.