ವರದಿ: ಪ್ರಭು ವಿ.ಎಸ್.
ನಾಡ ಪ್ರಭು ಕೆಂಪೇಗೌಡರನ್ನು ವಿಶ್ವದಲ್ಲಿ ಗೌರವಿಸುವಂತೆ ಮಾಡಿದ್ದು ಬಿಜೆಪಿ ಸರ್ಕಾರ ಎಂದು ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ್ ತಿಳಿಸಿದರು.
ಮದ್ದೂರು ಪಟ್ಟಣದಲ್ಲಿ ಬಿಜೆಪಿ ಹಾಗೂ ನಾಡಪ್ರಭು ಕೆಂಪೇಗೌಡ ಅಭಿಮಾನಿ ಬಳಗ ಆಯೋಜಿಸಿದ್ದ ಜನಾಭಿನಂದನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ನಾಡಪ್ರಭು ಕೆಂಪೇಗೌಡರು ರೈತರ ಮಗನಾಗಿ ಹುಟ್ಟಿ ಎಲ್ಲಾ ಸಮುದಾಯದ ಜನರ ಏಳಿಗೆಗಾಗಿ ಶ್ರಮಿಸಿದ ಏಕೈಕ ವ್ಯಕ್ತಿ. ನಮ್ಮ ಕೆಂಪೇಗೌಡರು ಎಲ್ಲಾ ಜಾತಿಯ ಜನರ ವ್ಯಾಪಾರ ವ್ಯವಹಾರಕ್ಕಾಗಿ 64 ಪೇಟೆಗಳನ್ನು ಕಟ್ಟಿದ ದೊಡ್ಡ ವ್ಯಕ್ತಿ. ಅವರು ಕಟ್ಟಿದ ನಗರ ಯೋಜನೆ ಇಂದಿಗೂ ಸಹ ಪ್ರಸ್ತುತವಾಗಿದೆ ಎಂದರು.
ಕೆಂಪೇಗೌಡರಂತಹ ಮಹಾನ್ ವ್ಯಕ್ತಿ ಸ್ಮರಿಸಿದರೆ ಸಾಲದು, ಅವರನ್ನು ವಿಶ್ವ ಮಟ್ಟದಲ್ಲಿ ಅವರನ್ನು ಗೌರವಿಸುವ ಕಾರ್ಯ ಆಗಬೇಕಿತ್ತು.ಅದನ್ನು ನಮ್ಮ ಸರ್ಕಾರ ಮಾಡಿದೆ. ನಾಡಪ್ರಭು ಕೆಂಪೇಗೌಡರ ಪುತ್ಥಳಿ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಬೇಕು ಎಂದರು.
ಕೆಂಪೇಗೌಡರ ಪುತ್ಥಳಿಗಾಗಿ ನಾಡಿನಾದ್ಯಂತ 16 ರಥಗಳಿಂದ 22 ಸಾವಿರ ಕಿ.ಮೀ. ಸಂಚರಿಸಿ ಪವಿತ್ರ ಮೃತ್ತಿಕೆ ಸಂಗ್ರಹಿಸಿ ಇತಿಹಾಸ ನಿರ್ಮಾಣ ಮಾಡಲಾಯಿತು ಎಂದರು.
ಮೊಳಗಿದ ಕೇಸರಿ ಕಹಳೆ
ಮುಂಬರುವ ವಿಧಾನಸಭಾ ಚುನಾವಣೆಗೆ ಮದ್ದೂರಿನಲ್ಲಿ ಇಂದಿನಿಂದಲೇ ತಯಾರಿ ಆರಂಭವಾಗಿದೆ.
ಹಳೇ ಮೈಸೂರು ಭಾಗವನ್ನು ಟಾರ್ಗೆಟ್ ಮಾಡಿರುವ ಬಿಜೆಪಿ ಇಂದು ಆಯೋಜಿಸಿದ್ದ ಜನಾಭಿನಂದನ ಕಾರ್ಯಕ್ರಮದ ಮೂಲಕ ಕೇಸರಿ ರಣಕಹಳೆ ಮೊಳಗಿಸಿದೆ. ಕಾರ್ಯಕ್ರಮಕ್ಕೆ ಆಗಮಿಸಿದ ಸಚಿವ ಅಶ್ವಥ್ ನಾರಾಯಣ್ ಅವರನ್ನು ಭವ್ಯ ಮೆರವಣಿಗೆಯಲ್ಲಿ ಕರೆತರಲಾಯಿತು.
ಬಿಜೆಪಿ ಕಾರ್ಯಕರ್ತರು ಸಚಿವ ಅಶ್ವಥ್ ನಾರಾಯಣ್ ಅವರಿಗೆ ಬೃಹತ್ ಹೂವಿನ ಹಾರ ಹಾಕಿ, ಪಟಾಕಿ ಸಿಡಿಸಿ ಅದ್ದೂರಿಯಾಗಿ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಮುಂದಿನ ಮದ್ದೂರು ವಿಧಾನಸಭಾ ಅಭ್ಯರ್ಥಿ ಎಸ್. ಪಿ. ಸ್ವಾಮಿ ಅವರ ಗೆಲುವು ನಿಮ್ಮ ಕೈಯಲ್ಲಿದೆ ಎಂದು ಅಶ್ವಥ್ ನಾರಾಯಣ್ ತಿಳಿಸಿದರು.
ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಪಿ.ಉಮೇಶ್, ಮುಖಂಡರಾದ ಇಂದ್ರೇಶ್, ಅಶೋಕ್ ಜಯರಾಮ್, ಜಿ.ಪಂ.ಮಾಜಿ ಸದಸ್ಯ ಕೃಷ್ಣೇಗೌಡ, ಮುಖಂಡರಾದ ಹನುಮಂತು, ಮನುಕುಮಾರ್ ,ಸುಧಾ, ಅಭಿಲಾಷ್, ಮಧುಕುಮಾರ್ ಸೇರಿದಂತೆ ಸಾವಿರಾರು ಕಾರ್ಯಕರ್ತರು ಉಪಸ್ಥಿತರಿದ್ದರು.