‘ಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಟ ಜಾತಿ ಒಳಮೀಸಲಾತಿ ಜಾರಿ ಹೋರಾಟ ಸಮಿತಿ’ ನೆತೃತ್ವದಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತಿರುವ ಧರಣಿ ಸ್ಥಳಕ್ಕೆ ಬಂದ ವಸತಿ ಸಚಿವ ವಿ ಸೋಮಣ್ಣ ಅವರನ್ನು ಘೇರಾವ್ ಹಾಕಿ ಮುಖ್ಯಮಂತ್ರಿಗಳು ಬರುವವರೆಗೂ ಬಿಡುವುದಿಲ್ಲ ಎಂದು ಪ್ರತಿಭಟನಾಕಾರರು ಕೂಗಾಡಿದರು.
ಮುಖ್ಯಮಂತ್ರಿ ಅಥವಾ ಸಂಬಂಧಪಟ್ಟ ಇಲಾಖಾ ಸಚಿವರು ಬಂದು ಲಿಖಿತ ಭರವಸೆ ನೀಡಬೇಕು ಎಂದು ಪಟ್ಟು ಹಿಡಿದ ಪ್ರತಿಭಟನಾಕಾರರು, ಸುರಿಯುವ ಮಳೆಯನ್ನೂ ಲೆಕ್ಕಿಸದೆ, ಹೋರಾಟದ ಹಾಡುಗಳನ್ನು ಹಾಡುತ್ತಾ ಪ್ರತಿಭಟಿಸಿದರು.
ಮುಖ್ಯಮಂತ್ರಿಗಳ ಸೂಚನೆಯ ಮೇರೆಗೆ ಮನವಿ ಪಡೆಯಲು ಬಂದ ವಿ ಸೋಮಣ್ಣರ ವಿರುದ್ದ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ನಂತರ ಸೋಮಣ್ಣ ಅಲ್ಲಿಂದ ತೆರಳಿದರು.
ಹೋರಾಟದ ನೇತೃತ್ವ ವಹಿಸಿರುವ ಅಂಬಣ್ಣ ಅರಲೀಕರ್ ಮಾತನಾಡಿ,”ಪೋಲೀಸ್ ಅಧಿಕಾರಿಗಳು ಕೂಡಲೇ ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಅವರಿಗೆ ಮಾಹಿತಿ ನೀಡಬೇಕು. ಜನ ಚಳಿ, ಮಳೆ ಲೆಕ್ಕಿಸದೆ ರಸ್ತೆಯಲ್ಲಿ ಕೂತಿದ್ದಾರೆ. ಅಲ್ಲಿ ಸಚಿವರು ಬೆಚ್ಚಗೆ ಮಲಗಿದ್ದಾರೆ. ಇದು ಸರಿಯಾದ ಕ್ರಮವಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಳ್ಳಾರಿಯಿಂದ ಬಂದಿದ್ದ ಬಸವರಾಜ್ ಪೂಜಾರಿ ಮಾತನಾಡಿ, ಸುಮಾರು 30 ವರ್ಷಗಳಿಂದ ಒಳಮೀಸಲಾತಿ ಹೋರಾಟ ನಡೆಯುತ್ತಲೇ ಇವೆ. ಈಗಲೂ 350 ಕಿ.ಮೀ. ನಡೆದುಕೊಂಡು ಬಂದಿರುವ ಹೋರಾಟಗಾರರನ್ನು ಈ ರೀತಿ ನಡೆಸಿಕೊಳ್ಳುವುದು ಸರಿಯಿಲ್ಲ ಎಂದು ಹೇಳಿದರು.