ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಕೊಲೆಗೆ ಸಿದ್ಧರಾಗಿ ಎಂದು ಪ್ರಚೋದನಾಕಾರಿ ಹೇಳಿಕೆ ನೀಡಿ ಟೀಕೆಗೆ ಗುರಿಯಾಗಿದ್ದ ಮಧ್ಯಪ್ರದೇಶದ ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಸಚಿವ ರಾಜ ಪಟೇರಿಯ ಅವರನ್ನು ಪನ್ನಾ ಜಿಲ್ಲಾ ಪೊಲೀಸರು ಮಂಗಳವಾರ (ಡಿಸೆಂಬರ್ 13) ಬಂಧಿಸಿದ್ದಾರೆ.
“ಪ್ರಧಾನಿ ಮೋದಿ ಚುನಾವಣೆಯನ್ನು ಅಂತ್ಯ ಮಾಡಲಿದ್ದಾರೆ. ಅವರು ಚುನಾವಣೆಯನ್ನು ಧರ್ಮ, ಜಾತಿ, ಭಾಷೆಯ ಆಧಾರದಲ್ಲಿ ವಿಭಜಿಸುತ್ತಾರೆ. ಈ ಹಿನ್ನೆಲೆಯಲ್ಲಿ ದಲಿತರು, ಬುಡಕಟ್ಟು ಹಾಗೂ ಅಲ್ಪಸಂಖ್ಯಾತರ ಭವಿಷ್ಯ ಅಪಾಯದಲ್ಲಿದೆ. ಸಂವಿಧಾನ ಉಳಿಯಬೇಕಿದೆ. ಆದ್ದರಿಂದ ಪ್ರಧಾನಿ ಮೋದಿ ಅವರನ್ನು ಕೊಲ್ಲಲು ಸಿದ್ಧರಾಗಿ, ಅಂದರೆ ಅವರನ್ನು ಸೋಲಿಸಲು ತಯಾರಾಗಿ” ಎಂದು ಹೇಳಿದ್ದರು.
ರಾಜ ಪಟೇರಿಯ ಅವರ ವಿರುದ್ಧ ಪನ್ನಾ ಜಿಲ್ಲೆಯ ಪವಾಯಿ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆಯ (ಐಪಿಸಿ) ನಾನಾ ಸೆಕ್ಷನ್ಗಳ ಅಡಿಯಲ್ಲಿ ಎಫ್ಐಆರ್ ದಾಖಲಾಗಿದೆ. ಮಂಗಳವಾರ ಬೆಳಿಗ್ಗೆ ದಾಮೋಹ್ ಜಿಲ್ಲೆಯ ಹಟ್ಟಾದಲ್ಲಿರುವ ರಾಜ ಪಟೇರಿಯ ಅವರ ನಿವಾಸದಲ್ಲಿಯೇ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಪನ್ನಾ ಜಿಲ್ಲೆಯ ಪವಾಯಿ ಪಟ್ಟಣದಲ್ಲಿ ಭಾನುವಾರ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಪಟೇರಿಯ ಮಾತನಾಡಿ ಪ್ರಚೋದನಾಕಾರಿ ಹೇಳಿಕೆ ನೀಡಿದ್ದರು.
“ಇಂಥ ಹೇಳಿಕೆಗಳು ಕಾಂಗ್ರೆಸ್ ಘನತೆಯನ್ನು ಕುಂದಿಸಿವೆ. ನಮ್ಮದು ಮಹಾತ್ಮಾ ಗಾಂಧಿ ಕಾಲದ ಕಾಂಗ್ರೆಸ್ ಅಲ್ಲ ಎಂಬುದನ್ನು ತೋರಿಸಿದೆ. ಇಟಲಿಯ ಮುಸಲೋನಿ ಮನಸ್ಥಿತಿಯ ಕಾಂಗ್ರೆಸ್ ಆಗುತ್ತಿದೆ” ಎಂದು ರಾಜ್ಯದ ಗೃಹ ಸಚಿವ ನರೋತ್ತಮ ಮಿಶ್ರಾ ಟೀಕಿಸಿದ್ದರು. ಬಳಿಕ ರಾಜ ಪಟೇರಿಯ ವಿರುದ್ಧ ಪ್ರಕರಣ ದಾಖಲಿಸುವಂತೆ ಆದೇಶಿಸಿದ್ದರು.
ರಾಜ ಪಟೇರಿಯ ಸ್ಪಷ್ಟನೆ
ಹೇಳಿಕೆಯು ವಿವಾದ ರೂಪ ಪಡೆದ ಬಳಿಕ ರಾಜ ಪಟೇರಿಯ ಸ್ಪಷ್ಟನೆ ನೀಡಿದ್ದಾರೆ. “ಪ್ರಧಾನಿ ಮೋದಿ ಅವರನ್ನು ಚುನಾವಣೆಯಲ್ಲಿ ಸೋಲಿಬೇಕೆಂಬ ಅರ್ಥದಲ್ಲಿ ಹೇಳಿದ್ದೇನೆ. ಈ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ಮಹಾತ್ಮ ಗಾಂಧಿ ಅನುಯಾಯಿಯಾಗಿರುವ ನಾನು ಯಾರನ್ನೂ ಕೊಲ್ಲುವ ಬಗ್ಗೆ ಮಾತನಾಡುವುದಿಲ್ಲ. ಸಂವಿಧಾನ, ದಲಿತರ ರಕ್ಷಣೆಗೆ, ನಿರುದ್ಯೋಗ ಮತ್ತು ಇತರ ಸಮಸ್ಯೆಗಳ ನಿವಾರಣೆಗೆ ಪ್ರಧಾನಿ ಮೋದಿ ಅವರನ್ನು ಚುನಾವಣೆಯಲ್ಲಿ ಸೋಲಿಸಬೇಕು ಎಂಬರ್ಥದಲ್ಲಿ ಹೇಳಿದ್ದೇನೆ” ಎಂದು ರಾಜ ಪಟೇರಿಯ ಹೇಳಿದರು.