ಕಬ್ಬಿಗೆ ಟನ್ ವೊಂದಕ್ಕೆ ₹ 4500 ನೀಡುವಂತೆ ಹಾಗೂ ಭತ್ತ ಹಾಲಿಗೆ ವೈಜ್ಞಾನಿಕ ಬೆಲೆ ನಿಗದಿಗೆ ಆಗ್ರಹಿಸಿ ಡಿ.19ರಂದು ರೈತಸಂಘ ನೀಡಿರುವ ಮಂಡ್ಯ ಬಂದ್ ಅನ್ನು ಕರುನಾಡ ಸೇವಕರು ಸಂಘಟನೆ ಬೆಂಬಲಿಸುತ್ತದೆ ಎಂದು ಸಂಘಟನೆಯ ಮೈಸೂರು ವಿಭಾಗೀಯ ಅಧ್ಯಕ್ಷ ಎಂ.ಬಿ.ನಾಗಣ್ಣಗೌಡ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 40 ದಿನಗಳಿಂದ ರೈತರು ಶಾಂತಿಯುತ ಧರಣಿ ನಡೆಸುತ್ತಿದ್ದರೂ ಸಕಾರಾತ್ಮಕ ನಿರ್ಧಾರ ಕೈಗೊಳ್ಳುವಲ್ಲಿ ರಾಜ್ಯ ಸರಕಾರ ವಿಫಲವಾಗಿದೆ. ಈ ವಿಷಯದಲ್ಲಿ ಅಗತ್ಯ ದನಿ ಎತ್ತುವಲ್ಲಿ ವಿರೋಧಪಕ್ಷಗಳು ನಿಷ್ಕ್ರಿಯವಾಗಿವೆ. ಈ ಹಿನ್ನೆಲೆಯಲ್ಲಿ ಸರಕಾರಕ್ಕೆ ರೈತರ ಕೂಗು ಮುಟ್ಟಿಸಲು ಎಲ್ಲ ಜನವರ್ಗಗಳು ಒಟ್ಟಾಗಿ ಮಂಡ್ಯ ಬಂದ್ ಗೆ ಬೆಂಬಲ ವ್ಯಕ್ತಪಡಿಸಬೇಕೆಂದು ಕೋರಿದರು.
ಅಂದು ಬೆಳಿಗ್ಗೆ 6ರಿಂದ ಮಧ್ಯಾಹ್ನ 2ವರೆಗೆ ಕರೆ ನೀಡಿರುವ ಮಂಡ್ಯ ಬಂದ್ನ್ನು ಮಂಡ್ಯದ ಎಲ್ಲ ವರ್ತಕರು, ಹೋಟೆಲ್ ಉದ್ದಿಮೆದಾರರು, ಸರಕು ಸಾಗಾಣಿಕೆ ವಾಹನಗಳ ಮಾಲೀಕರು, ಆಟೋ ಚಾಲಕರು ಒಮ್ಮತದಿಂದ ಬೆಂಬಲಿಸಬೇಕೆಂದು ಕೋರಿದರು.
ಮಂಡ್ಯದಲ್ಲಿ ಹೇಳಿಕೊಳ್ಳುವಂತ ಉದ್ದಿಮೆಗಳಿಲ್ಲ. ಉದ್ಯಮಗಳನ್ನು ಕಟ್ಟಿ ಬೆಳೆಸುವಲ್ಲಿ ಸೋತಿರುವ ಇಲ್ಲಿನ ರಾಜಕೀಯ ಮುಖಂಡರು ಧರ್ಮಸ್ಥಳ, ಕುಕ್ಕೆಸುಬ್ರಹ್ಮಣ್ಯಕ್ಕೆ ಜನರಿಗೆ ಧಾರ್ಮಿಕ ಯಾತ್ರೆ ಮಾಡಿಸುವುದಕ್ಕೆ ಸಿಮೀತವಾಗಿದ್ದಾರೆ. ಆದ್ದರಿಂದ ಜಿಲ್ಲೆಯ ಜನರ ಸ್ವಯಂಪ್ರೇರಿತವಾಗಿ ತಮ್ಮ ಬದುಕಿನ ಮೂಲಗಳ ಉಳಿವಿಗಾಗಿ ಹೋರಾಡಬೇಕಿದೆ ಎಂದರು.
ಗೋಷ್ಠಿಯಲ್ಲಿ ಮುಖಂಡರಾದ ಎಂ.ಎನ್.ಚಂದ್ರು, ಮನು ಹಾಗೂ ಮಹದೇವು ಉಪಸ್ಥಿತರಿದ್ದರು.