ಭಾರತೀಯ ಕುಸ್ತಿ ಫೆಡರೇಷನ್ ಸಂಸ್ಥೆಗೆ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರ ಆಪ್ತ ಸಂಜಯ್ ಆಯ್ಕೆಗೆ ಕುಸ್ತಿಪಟುಗಳು ವ್ಯಾಪಕವಾದಂತಹ ವಿರೋಧವನ್ನು ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಇಂದು ನೂತನ ಆಡಳಿತ ಮಂಡಳಿಯನ್ನು ಕ್ರೀಡಾ ಸಚಿವಾಲಯ ಅಮಾನತುಗೊಳಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಕುಸ್ತಿಪಟು ವಿನೇಶಾ ಫೋಗಟ್, ಇದು ಕುಸ್ತಿಪಟುಗಳ ಗೆಲುವು, ಈ ಗೆಲುವು ಪ್ರಪಂಚದಾದ್ಯಂತದ ಇತರ ಮಹಿಳೆಯರು ತಮ್ಮ ಧ್ವನಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ಹೇಳಿದ್ದಾರೆ.
ಡಿ.24ರಂದು ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರ ಆಪ್ತ ಸಂಜಯ್ ಸಿಂಗ್ ನೇತೃತ್ವದ ಕುಸ್ತಿ ಫೆಡರೇಶನ್ ಆಫ್ ಇಂಡಿಯಾ(ಡಬ್ಲ್ಯುಎಫ್ಐ)ವನ್ನು ನೇಮಕ ಮಾಡಲಾಗಿತ್ತು. ಇದೀಗ ಬ್ರಿಜ್ ಭೂಷಣ್ ಬದಲಿಗೆ ಸಂಜಯ್ ಸಿಂಗ್ ಡಬ್ಲ್ಯುಎಫ್ಐ ಮುಖ್ಯಸ್ಥರಾಗಿ ನೇಮಕಗೊಂಡ 3 ದಿನಗಳ ಬೆನ್ನಲ್ಲೇ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಹೊಸ ಡಬ್ಲ್ಯುಎಫ್ಐ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯು ತರಾತುರಿಯಲ್ಲಿತ್ತು ಮತ್ತು ವ್ಯವಸ್ಥಿತ ಪ್ರಕ್ರಿಯೆಯನ್ನು ಅನುಸರಿಸಲಾಗಿಲ್ಲ ಎಂದು ಸಚಿವಾಲಯ ಹೇಳಿದೆ. ಸಂಜಯ್ ಸಿಂಗ್ ನೇತೃತ್ವದ ಹೊಸ ಆಡಳಿತ ಮಂಡಳಿಯು ಅಸ್ತಿತ್ವದಲ್ಲಿರುವ ನಿಯಮಗಳು ಮತ್ತು ನಿಬಂಧನೆಗಳನ್ನು ಸಂಪೂರ್ಣ ನಿರ್ಲಕ್ಷ್ಯ ಮಾಡಿದೆ ಎಂದು ಉಲ್ಲೇಖಿಸಿರುವ ಸಚಿವಾಲಯವು ಭಾನುವಾರದಂದು ತನ್ನ ನಿರ್ಧಾರ ಪ್ರಕಟಿಸಿತ್ತು.
ನಾವು ಸೋಲನ್ನು ಒಪ್ಪಿಕೊಂಡಿದ್ದರೆ, ಪ್ರಪಂಚದಾದ್ಯಂತ ಮಹಿಳೆಯರು, ಅದು ಕುಸ್ತಿ ಅಥವಾ ಯಾವುದೇ ಕ್ಷೇತ್ರವಾಗಿರಬಹುದು, ತಮ್ಮ ಧ್ವನಿಯನ್ನು ಎತ್ತಲು ಹೆಣಗಾಡುತ್ತಿದ್ದರು. ಕುಸ್ತಿಪಟುಗಳಿಗೆ ಒಳ್ಳೆಯದನ್ನು ಮಾಡುವವರು WFIನ ಅಧ್ಯಕ್ಷರಾಗಬೇಕು. ವಿಶೇಷವಾಗಿ ಮಹಿಳೆಯರಿಗೆ ಒಳ್ಳೆಯವರಾಗಿರಬೇಕು. ನಾವು ಇದನ್ನು ಮೊದಲಿನಿಂದಲೂ ಹೇಳುತ್ತಿದ್ದೇವೆ. ನಾವು ಸಹಿಸಿಕೊಂಡಿರುವ ವಿಷಯಗಳನ್ನು ಇತರರು ಸಹಿಸಬೇಕಾಗಿಲ್ಲ ಎಂದು ನಾನು ಭಾವಿಸುತ್ತೇನೆ. ಅದು ನಮ್ಮ ಹೋರಾಟ ಎಂದು ಆಜ್ ತಕ್ಗೆ ನೀಡಿದ ಸಂದರ್ಶನದಲ್ಲಿ ಫೋಗಟ್ ಹೇಳಿದ್ದಾರೆ.
ಭಾರತೀಯ ಕುಸ್ತಿ ಫೆಡರೇಷನ್ ಸಂಸ್ಥೆಗೆ ಬ್ರಿಜ್ ಭೂಷಣ್ ಶರಣ್ ಸಿಂಗ್ ಆಪ್ತ ಸಂಜಯ್ ಸಿಂಗ್ನ್ನು ಆಯ್ಕೆ ಮಾಡಿದ ಬೆನ್ನಲ್ಲೇ ಒಲಿಂಪಿಕ್ ಪದಕ ವಿಜೇತೆ ಸಾಕ್ಷಿ ಮಲಿಕ್ ಅವರು ಪತ್ರಿಕಾಗೋಷ್ಟಿಯನ್ನು ನಡೆಸಿ ಕುಸ್ತಿಯನ್ನು ತ್ಯಜಿಸುವುದಾಗಿ ಹೇಳಿಕೆ ಕೊಟ್ಟಿದ್ದರು. ಬಳಿಕ ಕಣ್ಣೀರಿಟ್ಟು ಪತ್ರಿಕಾಗೋಷ್ಟಿಯಿಂದ ನಿರ್ಗಮಿಸಿದ್ದರು. ಕುಸ್ತಿ ಫೆಡರೇಷನ್ ಸಂಸ್ಥೆಗೆ ಬ್ರಿಜ್ ಭೂಷಣ್ ಶರಣ್ ಸಿಂಗ್ ಆಪ್ತ ಸಂಜಯ್ ಸಿಂಗ್ನ್ನು ನೇಮಿಸಿರುವುದಕ್ಕೆ ಬಳಿಕ ವ್ಯಾಪಕವಾದಂತಹ ವಿರೋಧ ವ್ಯಕ್ತವಾಗಿದ್ದವು. ಇದರ ಬೆನ್ನಲ್ಲೇ ಪ್ರಧಾನಿ ಮೋದಿ ಅವರಿಗೆ ಒಲಂಪಿಕ್ ಪದಕ ವಿಜೇತ ಬಜರಂಗ್ ಪುನಿಯಾ ಪತ್ರ ಬರೆದು, ನಾನು ನನ್ನ ಪದ್ಮಶ್ರೀ ಪ್ರಶಸ್ತಿಯನ್ನು ಹಿಂತಿರುಗಿಸುತ್ತಿದ್ದೇನೆ ಎಂದು ಹೇಳಿದ್ದರು. ಬಳಿಕ ತಮಗೆ ಲಭಿಸಿದ ಪದ್ಮಶ್ರೀ ಪ್ರಶಸ್ತಿಯನ್ನು ಪ್ರಧಾನಿ ಮೋದಿ ನಿವಾಸವಿರುವ ಕರ್ತವ್ಯ ಪಥದ ಪಾದಚಾರಿ ಮಾರ್ಗದಲ್ಲಿ ತೊರೆದು ಹೋಗಿದ್ದರು.