ಆಧುನಿಕತೆಯ ಕಾಲಘಟ್ಟದಲ್ಲಿ ವೃತ್ತಿ ನಾಟಕ ಕಲೆ ಮತ್ತು ಜಾನಪದ ವೈಭವ ಮರೆಯಾಗುತ್ತಿವೆ, ಇವನ್ನು ಮುಂದಿನ ಪೀಳಿಗೆಗೂ ತಲುಪಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಮನ್ಮುಲ್ ಉಪಾಧ್ಯಕ್ಷ ರಘುನಂದನ್ ಹೇಳಿದರು.
ಮಂಡ್ಯ ನಗರದ ಗಾಂಧಿಭವನದಲ್ಲಿ ಶಾರದಾ ಕಲಾನಿಕೇತನ ವೃತ್ತಿ ನಾಟಕ ಸಂಘ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಮತ್ತು ವಾರ್ಷಿಕೋತ್ಸವ ಅಂಗವಾಗಿ ವೃತ್ತಿ ನಾಟಕ ಪ್ರದರ್ಶನ ಮತ್ತು ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವೃತ್ತಿ ನಾಟಕ ಕಲೆಗಳು ಇನ್ನೂ ಜೀವಂತವಾಗಿರಲು ಕಲಾವಿದರ ಮತ್ತು ಕಲಾಪೊಷಕ ಆಸಕ್ತಿಯೇ ಕಾರಣವಾಗಿದೆ. ರಂಗಭೂಮಿ, ವೃತ್ತಿ ನಾಟಕಗಳು ಜನರ ಮನಪರಿವರ್ತನೆಯ ಮಾಧ್ಯಮಗಳಾಗಿದ್ದವು, ಇಂದು ಟಿ.ವಿ., ಮೊಬೈಲ್, ಆಧುನಿಕತೆಯ ಭರಾಟೆಯಲ್ಲಿ ಅವು ಮೆರೆಯಗುತ್ತಿವೆ ಎಂದು ನುಡಿದರು.
ಹಿರಿಯರು ಇಂತಹ ಕಲೆಯನ್ನು ಕಟ್ಟಿ ಬೆಳೆಸಿದ್ದಾರೆ, ಇವುಗಳನ್ನು ಉಳಿಸಿ ಮುಂದಿನ ಪೀಳಿಗೆಗೆ ತಲುಪಿಸುವ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸೋಣ, ವೃತ್ತಿ ನಾಟಕ ಕಲಾವಿದರನ್ನು ಸರ್ಕಾರ ಪ್ರೋತ್ಸಾಹಿಸಲಿ, ಹೆಚ್ಚಿನ ಅನುದಾನ ನೀಡಿ ಕಲಾವಂತಿಕೆ ಬೆಳೆಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಿ ಎಂದು ಆಶಿಸಿದರು.
ಇದೇ ಸಂದರ್ಭದಲ್ಲಿ ವೃತ್ತಿನಾಟಕ ಕಲಾವಿದ ತಮ್ಮಣ್ಣ ಮತ್ತು ತಂಡ ವಿವಿಧ ಹಾಸ್ಯ ದೃಶ್ಯಗಳನ್ನು ಪ್ರದರ್ಶನ ನೀಡುವ ಮೂಲಕ ಸಾಮಾಜಿಕ ಸಂದೇಶ ರವಾನಿಸಿದರು, ಸಹೃದಯಿಗಳು ಹಾಸ್ಯಗಡಲಿನಲ್ಲಿ ತೇಲಾಡಿದರು. ಸಾಧಕರನ್ನು ಗಣ್ಯರು ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಶಾರದಾ ಕಲಾನಿಕೇತನ ವೃತ್ತಿ ನಾಟಕ ಸಂಘ ವ್ಯವಸ್ಥಾಪಕ ಎನ್.ತಮ್ಮಣ್ಣ, ನಗರಸಭಾ ಮಾಜಿ ಸದಸ್ಯ ಎಂ.ಬಿ.ರಮೇಶ್ ವಿಶ್ವಕರ್ಮ, ಕಲಾವಿದರಾದ ಶಂಕರ, ಭವಾನಿ, ಕಲಾವಿದೆ ಲಲಿತಮ್ಮ, ನಿವೃತ್ತ ನೌಕರ ರಾಜಣ್ಣ, ಮೈಸೂರು ರಂಗಸ್ವಾಮಿ, ವಸಂತ, ತಬಲ ಸತ್ಯಪ್ಪ ಮತ್ತಿತರರಿದ್ದರು.