ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಮುಂಬರುವ ಜ.10ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಪರಿಶಿಷ್ಟ ಜಾತಿಗಳ ಐಕ್ಯತಾ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟದ ಮುಖಂಡ ಗುರಪ್ಪ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನ್ಯಾ.ಎ.ಜೆ.ಸದಾಶಿವ ಆಯೋಗದ ವರದಿಯನ್ನು ಏಕಪಕ್ಷೀಯ ವಾಗಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡದೇ, ಕೂಡಲೇ ಈ ವರದಿಯನ್ನು ಸಾರ್ವಜನಿಕ ಚರ್ಚೆಗೆ ಬಿಡಬೇಕು. ನ್ಯಾ.ಸದಾಶಿವ ಆಯೋಗದ ವರದಿಯ ಅಧಿಕೃತ ಪ್ರತಿಯನ್ನು 101 ಪರಿಶಿಷ್ಟ ಜಾತಿಯ ಸಂಘ- ಸಂಘಟನೆಗಳು ಹಾಗೂ ಅಸಕ್ತರಿಗೆ ನೀಡಬೇಕು. ಹಾಗೇಯ ವರದಿಯಿಂದ ಭಾದಿತವಾಗುವ ಸಮುದಾಯಗಳ ಅಭಿಪ್ರಾಯ, ಲಿಖಿತ ಆಕ್ಷೇಪಣೆ, ತಕರಾರುಗಳನ್ನು ಸ್ವೀಕರಿಸಲು ಸೂಕ್ತ ಅವಕಾಶ ನೀಡಬೇಕೆಂದು ಒತ್ತಾಯಿಸಿದರು.
ಪರಿಶಿಷ್ಟ ಜಾತಿಗಳ ಮೀಸಲಾತಿ ವರ್ಗಿಕರಣ ಕುರಿತು ಪರಿಶೀಲಿಸಲು ವೈಜ್ಞಾನಿಕ ಮಾನದಂಡಗಳುಳ್ಳ ಸೂಕ್ತ ಶಿಫಾರಸ್ಸು ಮಾಡಲು ರಾಜ್ಯ ಸಚಿವ ಸಂಪುಟ ರಚಿಸಿರುವ ಉಪ ಸಮಿತಿಯು ಪರಿಶಿಷ್ಟರ 101 ಜಾತಿಗಳ ಸಾಮಾಜಿಕ, ಶೈಕ್ಷಣಿಕ ಹಾಗೂ ಔದ್ಯೋಗಿಕ ಮತ್ತಿತರ ಸ್ಥಿತಿಗತಿಗಳನ್ನು ಅಧ್ಯಯನ ಮಾಡಲು ಅಗತ್ಯ ಪ್ರಸ್ತಾವನೆ ರೂಪಿಸಬೇಕೆಂದು ಒತ್ತಾಯಿಸಿದರು.
ಗೋಷ್ಠಿಯಲ್ಲಿ ಮುಖಂಡರಾದ ರಾಜೇಂದ್ರ, ಶ್ರೀನಿವಾಸ್, ಶಿವರಾಮ್, ಅಂಕಯ್ಯ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.