ಶಾಂತಿಯುತ ಧರಣಿ ನಡೆಸುತ್ತಿದ್ದ ರೈತರ ಮೇಲೆ ದಬ್ಬಾಳಿಕೆಯಿಂದ ದೌರ್ಜನ್ಯ ನಡೆಸಿದ ಆರೋಪ ಹೊತ್ತಿರುವ ಮಂಡ್ಯದ ಸರ್ಕಲ್ ಇನ್ಸ್ಪೆಕ್ಟರ್ ಸಂತೋಷ್ ಕುಮಾರ್ ಅವರನ್ನು ಕೂಡಲೇ ಕರ್ತವ್ಯದಿಂದ ಅಮಾನತು ಮಾಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತಸಂಘದ ಕಾರ್ಯಕರ್ತರು ಪಟ್ಟು ಹಿಡಿದು, ಮಂಡ್ಯದ ಪೊಲೀಸ್ ಪರೇಡ್ ಮೈದಾನದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.
ಸಂತೋಷ್ ಕುಮಾರ್ ವಿರುದ್ಧ ಘೋಷಣೆ ಕೂಗಿದ ರೈತ ಹೋರಾಟಗಾರರು ಸಂತೋಷ್ ಕುಮಾರ್ ಅಮಾನತ್ತು ಆಗಲೇ ಬೇಕೆಂದು ಆಕ್ರೋಶ ವ್ಯಕ್ತಪಡಿಸಿದರು. ಪೊಲೀಸರ ಲಾಠಿಗೆ ಬೂಟಿಗೆ ನಾವು ಹೆದರುವುದಿಲ್ಲ ಎಂದು ಘೋಷಣೆ ಮೊಳಗಿಸಿದರು.
ಬುಧವಾರ ಮಧ್ಯಾಹ್ನ ಇದ್ದಕ್ಕಿದ್ದಂತೆ ನೂರಾರು ಪೊಲೀಸರೊಂದಿಗೆ ಆಗಮಿಸಿದ ಸರ್ಕಲ್ ಇನ್ಸ್ಪೆಕ್ಟರ್ ಸಂತೋಷ್ ಕುಮಾರ್, ಏಕಾಏಕಿ ಶಾಮಿಯಾನವನ್ನು ಕಿತ್ತು ಹಾಕಲು ಆದೇಶಿಸಿದರು. ಈ ಸಮಯದಲ್ಲಿ ಮೊಬೈಲ್ನಲ್ಲಿ ಈ ದೃಶ್ಯಗಳನ್ನು ಚಿತ್ರೀಕರಣ ಮಾಡುತ್ತಿದ್ದ, ರೈತರಿಗೆ ಲಾಠಿ ಬೀಸಿದರು. ರೈತರನ್ನು ದಬ್ಬಾಳಿಕೆ, ದೌರ್ಜನ್ಯಗಳಿಂದ ಬಂಧಿಸಿ ಕರೆತಂದಿದ್ದಾರೆ. ಅವರನ್ನು ಕೂಡಲೇ ಸಸ್ಪೆಂಡ್ ಮಾಡಬೇಕೆಂದು ರೈತರು ಆಗ್ರಹಿಸಿದ್ದಾರೆ.
ರಾಷ್ಟ್ರನಾಯಕರ ಭಾವಚಿತ್ರಗಳಿಗೆ ಅಗೌರವ ತೋರಿದ ಪೊಲೀಸರು
ರೈತರು ಧರಣಿ ನಡೆಸುತ್ತಿದ್ದ ಸ್ಥಳಕ್ಕೆ ಬಂದು ಶಾಮಿಯಾನ ಕಿತ್ತು ಹಾಕುವ ವೇಳೆ ಪೊಲೀಸರು ರಾಷ್ಟ್ರ ನಾಯಕರಿಗೆ ಅವಮಾನ ಮಾಡಿದ್ದಾರೆಂದು ರೈತಸಂಘದ ಕಾರ್ಯಕರ್ತರು ಒತ್ತಾಯಿಸಿದರು.
ಪೆಂಡಲ್ ಕಿತ್ತುಹಾಕುವ ಸಂದರ್ಭದಲ್ಲಿ ಗಾಂಧೀಜಿ, ಡಾ.ಬಿ.ಆರ್.ಅಂಬೇಡ್ಕರ್, ಪ್ರೊ.ಎಂ.ಡಿ.ನಂಜುಂಡಸ್ವಾಮಿ ಹಾಗೂ ಕೆ.ಎಸ್.ಪುಟ್ಟಣ್ಣಯ್ಯ ಅವರ ಭಾವಚಿತ್ರಗಳನ್ನು ಕನಿಷ್ಟ ಸೌಜನ್ಯದಿಂದ ಎತ್ತಿಡುವ ಪ್ರಯತ್ನ ಮಾಡದೇ, ಚೆಲ್ಲಾಪಿಲ್ಲಿಯಾಗಿ ಬೇಕಾಬಿಟ್ಟಿ ಬಿಸಾಡಿದ್ದಾರೆ. ಆದ್ದರಿಂದ ಇದಕ್ಕೆ ಕಾರಣರಾದ ಎಲ್ಲಾ ಪೊಲೀಸರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ರೈತಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ ಒತ್ತಾಯಿಸಿದ್ದಾರೆ.