ರಾಷ್ಟ್ರಕವಿ ರಸಋಷಿ ಕುವೆಂಪು ಅವರ 119 ನೇ ಜನ್ಮೋತ್ಸವದ ಅಂಗವಾಗಿ ಗುರುವಾರ ಮಂಡ್ಯ ನಗರದ ರೈತ ಸಭಾಂಗಣದ ಆವರಣದಲ್ಲಿರುವ ರಾಷ್ಟ್ರಕವಿ ಕುವೆಂಪುರವರ ಪ್ರತಿಮೆಗೆ ನಗರಸಭೆ, ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತಿತರ ಸಂಘಟನೆಗಳ ನೇತೃತ್ವದಲ್ಲಿ ರಾಷ್ಟ್ರಕವಿ ಕುವೆಂಪುರವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಲಾಯಿತು.
ಇದೇ ಸಂದರ್ಭದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿ.ಕೆ.ರವಿಕುಮಾರ್ ಚಾಮಲಾಪುರ ಮಾತನಾಡಿ, ಕನ್ನಡ ಭಾಷೆಯು ಅತ್ಯಂತ ಪ್ರಾಚೀನವಾಗಿದ್ದು, 2500 ವರ್ಷಗಳ ಇತಿಹಾಸವುಳ್ಳ ಶ್ರೇಷ್ಠ ಭಾಷೆಯಲ್ಲಿ ರಾಷ್ಟ್ರಕವಿ ಕುವೆಂಪು ತಮ್ಮ ಅಮೋಘ ಸಾಹಿತ್ಯ ಕೃಷಿಯಿಂದ ನಡೆಸಿದ್ದಾರೆ ಎಂದರು.
ಕನ್ನಡಕ್ಕೆ ಮೊಟ್ಟಮೊದಲ ಜ್ಞಾನಪೀಠ ಪ್ರಶಸ್ತಿ ತಂದ ಕವಿ. ಮೊದಲ ಕರ್ನಾಟಕ ರತ್ನ ಪ್ರಶಸ್ತಿ ಪುರಸ್ಕೃತರು. ತಮ್ಮ ವಿಶ್ವಮಾನವ ಸಂದೇಶದಿಂದ ಎಲ್ಲರಲ್ಲಿ ಸಾಹಿತ್ಯ ಪ್ರೀತಿಯನ್ನು ಉಂಟು ಮಾಡುವಲ್ಲಿ ಅವರ ಕೊಡುಗೆ ಅನನ್ಯವಾದುದು ಎಂದರು.
ಇದೇ ಸಂದರ್ಭದಲ್ಲಿ ಕೃಷಿ ಲಯನ್ಸ್ ಸಂಸ್ಥೆ ವತಿಯಿಂದ ಪ್ರಾಧ್ಯಾಪಕ ಶಂಕರಗೌಡ ಅವರನ್ನು ಸನ್ಮಾನಿಸಲಾಯಿತು. ನಂತರ ಮಾತನಾಡಿದ ಅವರು, ವಿಶ್ವಮಾನವ ಪ್ರಶಸ್ತಿ ಸ್ವೀಕರಣೆಯಿಂದ ನನ್ನ ಸಾಹಿತ್ಯ ಕೃಷಿಗೆ ಬಲಬಂದಂತಾಗಿದೆ ಎಂದರು.
ಕೃಷಿಕ್ ಲಯನ್ಸ್ ಸಂಸ್ಥೆಯ ಆಡಳಿತಾಧಿಕಾರಿ ಕೆ.ಟಿ. ಹನುಮಂತು ಮಾತನಾಡಿ, ರಾಷ್ಟ್ರಕವಿ ಕುವೆಂಪುರವರ ಆದರ್ಶ ಹಾಗೂ ಸರಳ ಜೀವನ ತತ್ವವನ್ನು ವಿಶ್ವಮಾನವ ಸಂದೇಶವನ್ನು ಎಲ್ಲರೂ ಕೂಡ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು, ಕನ್ನಡ ಭಾಷೆಯ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.
ನಾಡಗೀತೆ ಹಾಗೂ ರೈತ ಗೀತೆಗಳನ್ನು ಗಾಯಕರಾದ ಡೇವಿಡ್, ವಿದ್ಯಾಶಂಕರ್ ಹಂಸಲೇಖ ವೇದ, ನೇತ್ರಾವತಿ ಸೇರಿದಂತೆ ಅನೇಕ ಗಾಯಕರು ಹಾಡಿದರು. ಕಾರ್ಯಕ್ರಮದಲ್ಲಿ ಸಾಹಿತಿ ಡಾ.ಪ್ರದೀಪ್ ಕುಮಾರ್ ಹೆಬ್ರಿ. ಡಾ.ಶ್ರೀ ನಿವಾಸ ಶೆಟ್ಟಿ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಮಂಡ್ಯ ಎಜುಕೇಷನ್ ಸೊಸೈಟಿ ಅಧ್ಯಕ್ಷ ಧರಣೇಂದ್ರಯ್ಯ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅಂಜನಾ ಶ್ರೀಕಾಂತ್, ನಗರ ಕ.ಸಾ.ಪ. ಘಟಕದ ಅಧ್ಯಕ್ಷೆ ಸುಜಾತ ಕೃಷ್ಣಪ್ಪ, ಡಾ.ಹುಸ್ಕೂರು ಕೃಷ್ಣೇಗೌಡ , ಶಿಕ್ಷಕಿ ಬಿ.ಜಿ .ಉಮಾ ಸೇರಿದಂತೆ ಮಂಡ್ಯ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಪ್ರತಿಭಾಂಜಲಿ ಸಂಗೀತ ಅಕಾಡೆಮಿ, ಕೃಷಿಕ ಲಯನ್ಸ್, ಶ್ರೀರಂಜಿನಿ ಕಲಾವೇದಿಕೆಯ ಮುಖಂಡರು ಹಾಜರಿದ್ದರು.