ವರದಿ : ಅಣ್ಣೂರು ಜಗದೀಶ್
-
ಇಓ ನೇತೃತ್ವದಲ್ಲಿ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ಸಭೆ
- ಇಂದು ನಾಳೆ ಹೊಲಗದ್ದೆಗಳತ್ತ ತೆರಳದಂತೆ ರೈತರಿಗೆ ಸೂಚನೆ
ಮದ್ದೂರು ತಾಲೂಕು ಚಿಕ್ಕರಸಿನಕೆರೆ ಗ್ರಾಮದ ಕಬ್ಬಿನ ಗದ್ದೆಯಲ್ಲಿ ಒಂಟಿ ಸಲಗ ಪ್ರತ್ಯಕ್ಷವಾದ ಹಿನ್ನೆಲೆಯಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಸಂದೀಪ್ ಅವರ ನೇತೃತ್ವದಲ್ಲಿ ಸುತ್ತಮುತ್ತಲ ಗ್ರಾಮಗಳ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಸಭೆ ನಡೆಸಲಾಯಿತು.
ಚಿಕ್ಕರಸಿನಕೆರೆ ಗ್ರಾಮಕ್ಕೆ ಆಗಮಿಸಿರುವುದು ಒಂಟಿ ಸಲಗವಾಗಿದ್ದು, ಇದರ ಜೊತೆಗೆ ಯಾವುದೇ ಆನೆಗಳಿಲ್ಲದಿರುವುದರಿಂದ ಸಲಗದ ಪುಂಡಾಟಿಕೆ ಹೆಚ್ಚಾಗಬಹುದು, ಹಾಗಾಗಿ ಸುತ್ತಮುತ್ತಲ ಎಲ್ಲಾ ಗ್ರಾಮಗಳ ರೈತರು ಶನಿವಾರ ಹಾಗೂ ಭಾನುವಾರ ಮಧ್ಯಾಹ್ನ 12 ಗಂಟೆಯವರೆಗೆ ತಮ್ಮ ಹೊಲಗದ್ದೆಗಳಲ್ಲಿ ಕೆಲಸ ಮಾಡದಂತೆ ಜಾಗೃತೆ ವಹಿಸಬೇಕು ಈ ಬಗ್ಗೆ ಸಾರ್ವಜನಿಕರಲ್ಲಿ ತಿಳುವಳಿಕೆ ಮೂಡಿಸುವಂತೆ ಸಂದೀಪ್ ಅವರು ತಿಳಿಸಿದರು.
ಶನಿವಾರ ಹಾಗೂ ಭಾನುವಾರ ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಯುವಕರು ಕೃಷಿ ಜಮೀನುಗಳಲ್ಲಿ ಹೆಚ್ಚು ಹೊಸ ವರ್ಷ ಸಂಭ್ರಮ ಸಂಭ್ರಮವನ್ನು ಆಚರಿಸುವ ವಾಡಿಕೆ ನಡೆದುಕೊಂಡು ಬಂದಿದೆ. ಒಂಟಿ ಸಲಗ ಇರುವ ಹಿನ್ನೆಲೆಯಲ್ಲಿ ಯುವಕರನ್ನು ಹೆಚ್ಚು ಪಾರ್ಟಿಗಳಲ್ಲಿ ತೊಡಗಿಕೊಳ್ಳಲು ಬಿಡಬಾರದು.
ಈ ಬಗ್ಗೆ ಆಟೋ ಮೂಲಕ ಮೈಕ್ ಅಳವಡಿಸಿ ಜನರಲ್ಲಿ ಜಾಗೃತಿ ಮೂಡಿಸಿ ಒಂಟಿ ಸಲಗ ಅರಣ್ಯಕ್ಕೆ ತೆರಳುವವರೆಗೂ ಜನರನ್ನು ಜಮೀನುಗಳಲ್ಲಿ ಕೃಷಿ ಕೆಲಸ ತಿಳುವಳಿಕೆ ನೀಡಬೇಕೆಂದು ಉಪ ವಲಯ ಅರಣ್ಯಧಿಕಾರಿ ರವಿ ತಿಳಿಸಿದರು.
ಸಲಗವನ್ನು ಅರಣ್ಯದ ಕಡೆ ಕರದೊಯ್ದು ಬಿಡುವವರೆಗೂ ಈ ಪ್ರಕ್ರಿಯೆ ನಡೆಯುತ್ತಿರಬೇಕು ಇಲ್ಲವಾದಲ್ಲಿ ಪ್ರಾಣಪಾಯುಗಳು ಸಂಭವಿಸುವ ಸಾಧ್ಯತೆ ಇರುತ್ತದೆ. ಕಳುಹಿಸಿದ ನಂತರ ನಾವೇ ಎಲ್ಲರಿಗೂ ವಿಚಾರ ತಿಳಿಸುತ್ತೇವೆ ಅಲ್ಲಿವರೆಗೂ ಎಲ್ಲರೂ ಕಾರ್ಯಪ್ರವೃತ್ತರಾಗಿರಬೇಕೆಂದು ಅವರು ಎಚ್ಚರಿಕೆ ನೀಡಿದರು.
ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಮಂಜುನಾಥ್, ಅಣ್ಣೂರು, ಬಿದರಹಳ್ಳಿ, ಆಲೂರು, ಕೂಳಗೆರೆ, ಕಾಡುಕೊತ್ತನಹಳ್ಳಿ, ಭಾರತೀನಗರ, ಕ್ಯಾತಾಘಟ್ಟ, ಚಿಕ್ಕ ಅರಸಿನಕೆರೆ, ಮಾದರಹಳ್ಳಿ, ಮೆಣಸಗೆರೆ, ಬೊಮ್ಮನಹಳ್ಳಿ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.